ನಾಗಪುರ: ಮೊದಲ ದಿನ ಬೌಲಿಂಗ್ ಮೂಲಕ ಮಿಂಚಿದ ವಿದರ್ಭ 19 ವರ್ಷದೊಳಗಿನವರ ತಂಡ ಕೂಚ್ ಬೆಹಾರ್ ಕಪ್ ಕ್ರಿಕೆಟ್ ಟೂರ್ನಿಯ ಎರಡನೇ ದಿನ ಭರ್ಜರಿ ಬ್ಯಾಟಿಂಗ್ ಮಾಡಿತು.
ವೈ.ವಿ.ರಾಥೋಡ್ (101; 121 ಎ, 14 ಬೌಂ) ಅವರ ಅಮೋಘ ಶತಕ ಮತ್ತು ಆರಂಭಿಕ ಬ್ಯಾಟ್ಸ್ಮನ್ ಎ.ಎಂ.ಕುಮಾರ್ (50; 123 ಎ, 7 ಬೌಂ) ಅವರ ಅರ್ಧಶತಕದ ಬಲದಿಂದ ಆ ತಂಡ ಬೃಹತ್ ಮೊತ್ತದತ್ತ ಹೆಜ್ಜೆ ಹಾಕಿದೆ.
ಎರಡನೇ ದಿನದಾಟದ ಮುಕ್ತಾಯದ ವೇಳೆ ತಂಡ ಏಳು ವಿಕೆಟ್ ಕಳೆದುಕೊಂಡು 331 ರನ್ ಗಳಿಸಿದ್ದು 199 ರನ್ಗಳ ಮುನ್ನಡೆ ಸಾಧಿಸಿದೆ.
ಮೊದಲ ದಿನವಾದ ಗುರುವಾರ ನಲ್ಕಂಡೆ, ರೋಹಿತ್ ಮತ್ತು ರೇಖಡೆ ದಾಳಿಗೆ ನಲುಗಿದ ಕರ್ನಾಟಕ ಮೊದಲ ಇನಿಂಗ್ಸ್ನಲ್ಲಿ 132 ರನ್ಗಳಿಗೆ ಆಲೌಟಾಗಿತ್ತು. ವಿದರ್ಭ ವಿಕೆಟ್ ಕಳೆದುಕೊಳ್ಳದೆ 64 ರನ್ ಗಳಿಸಿತ್ತು. ಕ್ರೀಸ್ನಲ್ಲಿದ್ದ ಅಥರ್ವ ಥಾಯ್ಡೆ ಮತ್ತು ಎ.ಎಂ.ಕುಮಾರ್ ಶುಕ್ರವಾರವೂ ಬ್ಯಾಟಿಂಗ್ ವೈಭವ ಮುಂದುವರಿಸಿದರು. ಮೊದಲ ವಿಕೆಟ್ಗೆ 101 ರನ್ ಸೇರಿಸಿ ಇನಿಂಗ್ಸ್ಗೆ ಭದ್ರ ಬುನಾದಿ ಹಾಕಿಕೊಟ್ಟರು.
ಇವರಿಬ್ಬರು ಔಟಾದ ನಂತರ ನಾಲ್ಕನೇ ಕ್ರಮಾಂಕದ ರಾಥೋಡ್ ಮತ್ತು ಮೋಹಕ ಇನಿಂಗ್ಸ್ ಕಟ್ಟಿದರು. 12 ರನ್ ಗಳಿಸಿದ ಎನ್.ಆರ್.ಚೌಹಾಣ್ ಔಟಾದ ನಂತರ ರಾಥೋಡ್ ಜೊತೆಗೂಡಿದ ಸಂದೇಶ್ ದ್ರುಗುವಾರ್ ಕೂಡ ಕರ್ನಾಟಕದ ಬೌಲರ್ಗಳನ್ನು ದಂಡಿಸಿದರು.
ಕರ್ನಾಟಕ, ಮೊದಲ ಇನಿಂಗ್ಸ್: 68.5 ಓವರ್ಗಳಲ್ಲಿ 132; ವಿದರ್ಭ, ಮೊದಲ ಇನಿಂಗ್ಸ್ (ಗುರುವಾರದ ಅಂತ್ಯಕ್ಕೆ 19 ಓವರ್ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 64): 109 ಓವರ್ಗಳಲ್ಲಿ 7 ವಿಕೆಟ್ಗಳಿಗೆ 331 (ಅಥರ್ವ ಥಾಯ್ಡೆ 47, ಎ.ಎಂ.ಕುಮಾರ್ 50, ವೈ.ವಿ.ರಾಥೋಡ್ 101, ಸಂದೇಶ್ ದ್ರುಗುವಾರ್ ಔಟಾಗದೆ 47; ಬಿ.ಎಂ.ಶ್ರೇಯಸ್ 44ಕ್ಕೆ2).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.