ಬೆಂಗಳೂರು: ‘ನಮ್ಮ ಕಾಲದಲ್ಲಿ ಯಾರೂ ದುಡ್ಡಿಗಾಗಿ ಆಡುತ್ತಿರಲಿಲ್ಲ. ಫುಟ್ಬಾಲ್ ಕ್ರೀಡೆಯನ್ನು ಎಲ್ಲರೂ ಪ್ರೀತಿಸುತ್ತಿದ್ದರು. ಅದನ್ನೇ ಉಸಿರಾಗಿಸಿಕೊಂಡಿದ್ದರು’ ಎಂದು ಕರ್ನಾಟಕದ ಹಿರಿಯ ಫುಟ್ಬಾಲ್ ಆಟಗಾರ ಅಮ್ಜದ್ ಖಾನ್ ಹೇಳಿದರು.
ಕರ್ನಾಟಕ ಮತ್ತು ತೆಲಂಗಾಣ ನಡುವಣ ಸಂತೋಷ್ ಟ್ರೋಫಿ ಪಂದ್ಯ ವೀಕ್ಷಿಸಲು ಬಂದಿದ್ದ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದರು.
‘1968–69ರಲ್ಲಿ ಸಂತೋಷ್ ಟ್ರೋಫಿ ಗೆದ್ದ ಮೈಸೂರು ರಾಜ್ಯ ತಂಡ ಸರ್ವಶ್ರೇಷ್ಠವಾದುದು. ಆಗ ತಂಡದಲ್ಲಿ ಘಟಾನುಘಟಿ ಆಟಗಾರರಿದ್ದರು. ಬಂಗಾಳ, ಪಂಜಾಬ್, ಕೇರಳದಂತಹ ಬಲಿಷ್ಠ ತಂಡಗಳನ್ನು ನಾವು ಲೀಲಾಜಾಲವಾಗಿ ಮಣಿಸಿದ್ದೆವು. ಎದುರಾಳಿ ತಂಡ ಎಷ್ಟೇ ಬಲಿಷ್ಠವಾಗಿದ್ದರೂ ಅಂಜದೆ ಛಲದಿಂದ ಹೋರಾಡುತ್ತಿದ್ದೆವು. ಹೀಗಾಗಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿತ್ತು’ ಎಂದರು.
‘ಮೊದಲೆಲ್ಲಾ ಸಂತೋಷ್ ಟ್ರೋಫಿಯಲ್ಲಿ ಆಡುವುದು ಪ್ರತಿಷ್ಠೆಯ ವಿಷಯವಾಗಿತ್ತು. ಈ ಚಾಂಪಿಯನ್ಷಿಪ್ನಲ್ಲಿ ಆಟಗಾರರಿಂದ ಮೂಡಿಬರುವ ಸಾಮರ್ಥ್ಯವನ್ನೇ ಮಾನದಂಡವಾಗಿಟ್ಟುಕೊಂಡು ರಾಷ್ಟ್ರೀಯ ತಂಡದಲ್ಲಿ ಸ್ಥಾನ ನೀಡಲಾಗುತ್ತಿತ್ತು. ಸಂತೋಷ್ ಟ್ರೋಫಿಯಲ್ಲಿ ಆಡಿ ಗಮನ ಸೆಳೆದವರು ಒಲಿಂಪಿಕ್ಸ್ನಲ್ಲೂ ಮಿಂಚಿದ ಉದಾಹರಣೆಗಳು ಸಾಕಷ್ಟಿವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.