ಬೆಂಗಳೂರು: ನಗರದ ಸರೋಜಿನಿ ದಾಮೋದರ್ ಫೌಂಡೇಷನ್ ವತಿಯಿಂದ ರಾಜ್ಯದ 16 ಕ್ರೀಡಾಪಟುಗಳ ವಿದ್ಯಾಭ್ಯಾಸಕ್ಕಾಗಿ ‘ವಿದ್ಯಾಕ್ರೀಡಾ–ವಿದ್ಯಾಧನ’ ವಿದ್ಯಾರ್ಥಿವೇತನವನ್ನು ಗುರುವಾರ ಪ್ರದಾನ ಮಾಡಲಾಯಿತು.
ಯವನಿಕಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೋತ್ಸಾಹಧನದ ಚೆಕ್ ವಿತರಿಸಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಪ್ರಮೋದ ಮಧ್ವರಾಜ್, ‘ ಇನ್ನೆರಡು ದಿನಗಳಲ್ಲಿ ರಾಜ್ಯದ ಕ್ರೀಡಾ ನೀತಿ ಸಿದ್ಧವಾಗಲಿದೆ. ಕ್ರೀಡಾಪಟುಗಳು, ಸಂಸ್ಥೆಗಳು ಮತ್ತು ಕ್ರೀಡಾ ಆಡಳಿತಗಾರರ ಸಲಹೆಗಳನ್ನು ಪಡೆದು ಕರಡು ಸಿದ್ಧಗೊಳಿಸಲಾಗಿದೆ. ದೇಶದಲ್ಲಿಯೇ ಅತ್ಯುತ್ತಮವಾದ ಕ್ರೀಡಾ ನೀತಿ ನಮ್ಮದಾಗಲಿದೆ. ಶೀಘ್ರದಲ್ಲಿಯೇ ಸಚಿವ ಸಂಪುಟದಿಂದ ಅನುಮೋದನೆ ಪಡೆಯಲಾಗುವುದು’ ಎಂದರು.
‘ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಗಳಲ್ಲಿ ಉದ್ಯೋಗ ಮೀಸಲಾತಿ ನೀಡುವ ನಿಯಮವು ಕ್ರೀಡಾನೀತಿಯಲ್ಲಿದೆ. ಅಂಧ ಕ್ರಿಕೆಟಿಗರಿಗೆ ಉದ್ಯೋಗ ನೀಡಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅನುಮೋದನೆ ನೀಡಿದ್ದಾರೆ. ಕೆಲವು ತಾಂತ್ರಿಕ ಕಾರಣಗಳಿಂದ ಅದು ಬಾಕಿ ಉಳಿದಿದೆ. ನಿಯಮಾವಳಿ ಬದಲಾಗುವುದರಿಂದ ಸಮಸ್ಯೆ ಪರಿಹಾರವಾಗಲಿದೆ’ ಎಂದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಿರ್ದೇಶಕ ಅನುಪಮ್ ಅಗರವಾಲ್, ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಕೆ. ಗೋವಿಂದ ರಾಜ್, ಸರೋಜಿನಿ ದಾಮೋದರ್ ಫೌಂಡೇಷನ್ ಅಧ್ಯಕ್ಷ ಶಿಬುಲಾಲ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.