ಜೊಹಾನ್ಸ್ಬರ್ಗ್ (ಎಎಫ್ಪಿ): ಏಕದಿನ ಸರಣಿಯ ಆರನೇ ಪಂದ್ಯದ ವೇಳೆ ಗಾಯಗೊಂಡಿದ್ದ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ಭಾರತದ ಎದುರಿನ ಮೂರು ಪಂದ್ಯಗಳ ಟ್ವೆಂಟಿ–20 ಕ್ರಿಕೆಟ್ ಸರಣಿಯಲ್ಲಿ ಆಡುವುದಿಲ್ಲ.
ಸೆಂಚೂರಿಯನ್ನಲ್ಲಿ ಶುಕ್ರವಾರ ನಡೆದಿದ್ದ ಪಂದ್ಯದ ವೇಳೆ ಡಿವಿಲಿಯರ್ಸ್ ಎಡ ಮೊಣಕಾಲಿಗೆ ಗಾಯವಾಗಿತ್ತು.
‘ಡಿವಿಲಿಯರ್ಸ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು ಇನ್ನಷ್ಟು ಸಮಯ ವಿಶ್ರಾಂತಿ ಪಡೆಯಬೇಕು’ ಎಂದು ದಕ್ಷಿಣ ಆಫ್ರಿಕಾ ತಂಡದ ವೈದ್ಯ ಮಹಮ್ಮದ್ ಮೂಸಾಜೀ ತಿಳಿಸಿದ್ದಾರೆ.
ಕುಲದೀಪ್ಗೆ ಗಾಯ: ಭಾರತ ತಂಡದ ಚೈನಾಮನ್ ಶೈಲಿಯ ಬೌಲರ್ ಕುಲದೀಪ್ ಯಾದವ್ ಕೂಡ ಮೊದಲ ಟ್ವೆಂಟಿ–20 ಪಂದ್ಯದಲ್ಲಿ ಆಡಲಿಲ್ಲ. ಆರನೇ ಏಕದಿನ ಪಂದ್ಯದ ವೇಳೆ ಕುಲದೀಪ್ ಬೆರಳಿಗೆ ಗಾಯವಾಗಿತ್ತು. ಇದರಿಂದ ಅವರು ಇನ್ನೂ ಚೇತರಿಸಿಕೊಂಡಿಲ್ಲ.
ರೈನಾಗೆ ಅವಕಾಶ: ಎಡಗೈ ಬ್ಯಾಟ್ಸ್ಮನ್ ಸುರೇಶ್ ರೈನಾ ಒಂದು ವರ್ಷದ ನಂತರ ಅಂತರರಾಷ್ಟ್ರೀಯ ಟ್ವೆಂಟಿ–20 ಪಂದ್ಯ ಆಡಿದರು. 2017ರ ಫೆಬ್ರುವರಿಯಲ್ಲಿ ಕೊನೆಯ ಪಂದ್ಯ ಆಡಿದ್ದರು.
ಕರ್ನಾಟಕದ ಮನೀಷ್ ಪಾಂಡೆ ಮತ್ತು ವೇಗದ ಬೌಲರ್ ಜಯದೇವ್ ಉನದ್ಕತ್ ಅವರೂ ಆಡುವ ಬಳಗದಲ್ಲಿ ಸ್ಥಾನ ಗಳಿಸಿದರು. ಆದರೆ ಕೆ.ಎಲ್.ರಾಹುಲ್ಗೆ ಅವಕಾಶ ಸಿಗಲಿಲ್ಲ.
ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಹೆನ್ರಿಕ್ ಕ್ಲಾಸೆನ್ ಮತ್ತು ಮಧ್ಯಮ ವೇಗದ ಬೌಲರ್ ಜೂನಿಯರ್ ಡಾಲ, ಅಂತರರಾಷ್ಟ್ರೀಯ ಟ್ವೆಂಟಿ–20ಗೆ ಪಾದಾರ್ಪಣೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.