ಪುಣೆ: ‘ಇಂಗ್ಲೆಂಡ್ ಗೊ ಬ್ಯಾಕ್’ ಘೋಷಣೆಗಳನ್ನು ಕೂಗುತ್ತ ಸೋಮವಾರ ಇಲ್ಲಿನ ಗಹುಂಜೆ ಪ್ರದೇಶದಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನುಗ್ಗಿ ಪ್ರತಿಭಟಿಸಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಛತ್ರಪತಿ ಶಿವಾಜಿ ಅವರು ಬಳಸುತ್ತಿದ್ದ ಖಡ್ಗವನ್ನು ಆ ದೇಶ ಇಟ್ಟುಕೊಂಡಿರುವುದು ಅವರ ಆಕ್ರೋಶಕ್ಕೆ ಕಾರಣವಾಗಿತ್ತು.
ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ತಂಡಗಳು, ಮಾರ್ಚ್ 23, 26 ಮತ್ತು 28ರಂದು ಇಲ್ಲಿ ಮೂರು ಏಕದಿನ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಿವೆ.
ಈ ಐವರು ಕೊಲ್ಹಾಪುರ ಮೂಲದ ಸಂಘಟನೆಯೊಂದರ ಸದಸ್ಯರು. ಶಿವಾಜಿ ಮಹಾರಾಜ ಅವರು ಬಳಸುತ್ತಿದ್ದರೆನ್ನಲಾದ ಭವಾನಿ ಖಡ್ಗವನ್ನು, ವೇಲ್ಸ್ನ ರಾಜಕುಮಾರ ಪ್ರಿನ್ಸ್ ಅವರಿಗೆ ಶಿವಾಜಿ ವಂಶಸ್ಥರಾದ ಕೊಲ್ಹಾಪುರದ ನಾಲ್ಕನೇ ಶಿವಾಜಿ ಅವರು ಉಡುಗೊರೆಯಾಗಿ ನೀಡಿದ್ದರು. ಈ ಖಡ್ಗವನ್ನು ದೇಶಕ್ಕೆ ಮರಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.
‘ಐವರು ಆರೋಪಿಗಳು ಸೋಮವಾರ ಮಧ್ಯಾಹ್ನ ಧ್ವಜಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತ ಕ್ರೀಡಾಂಗಣಕ್ಕೆ ಪ್ರವೇಶಿಸಿದ್ದಾರೆ. ತಾವು ಶಿವಾಜಿ ಭಕ್ತರೆಂದು ಅವರು ನಮಗೆ ತಿಳಿಸಿದ್ದಾರೆ. 1875ರಲ್ಲಿ ವೇಲ್ಸ್ನ ರಾಜಕುಮಾರ ಅವರು ಬಲವಂತವಾಗಿ ಆ ಖಡ್ಗವನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬುದು ಅವರ ವಾದವಾಗಿದೆ’ ಎಂದು ತಲೆಗಾಂವ್ ದಭಾಡೆ ಪೊಲೀಸ್ ಠಾಣೆ ಅಧಿಕಾರಿ ತಿಳಿಸಿದರು.
ಕ್ರೀಡಾಂಗಣಕ್ಕೆ ಅತಿಕ್ರಮ ಪ್ರವೇಶ ವಿರುದ್ಧ ಭಾರತೀಯ ದಂಡ ಸಂಹಿತೆಯಡಿ ಐವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.