ADVERTISEMENT

ಮೊಹಮ್ಮದ್ ಸಿರಾಜ್‌ಗೆ ಜನಾಂಗೀಯ ನಿಂದನೆ: ಆಸಿಸ್ ಪ್ರೇಕ್ಷಕರು ದೋಷಮುಕ್ತ- ವರದಿ

ರಾಯಿಟರ್ಸ್
Published 27 ಜನವರಿ 2021, 2:23 IST
Last Updated 27 ಜನವರಿ 2021, 2:23 IST
ಮೊಹಮ್ಮದ್ ಸಿರಾಜ್: ಎಎಫ್‌ಪಿ ಚಿತ್ರ
ಮೊಹಮ್ಮದ್ ಸಿರಾಜ್: ಎಎಫ್‌ಪಿ ಚಿತ್ರ   

ಮೆಲ್ಬರ್ನ್: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ವೇಳೆ ಭಾರತದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಜನಾಂಗೀಯವಾಗಿ ನಿಂದಿಸಿದ 6 ಪ್ರೇಕ್ಷಕರನ್ನು ಆಸ್ಟ್ರೇಲಿಯಾದ ಕ್ರಿಕೆಟ್ ಮಂಡಳಿ ದೋಷಮುಕ್ತಗೊಳಿಸಿದೆ ಎಂದು ಆಸ್ಟ್ರೇಲಿಯಾದ ಮಾಧ್ಯಮ ಬುಧವಾರ ವರದಿ ಮಾಡಿದೆ.

ಪಂದ್ಯದ ಸಂದರ್ಭ ಸಿರಾಜ್, ಬೌಂಡರಿ ಹಗ್ಗದ ಬಳಿ ಫೀಲ್ಡಿಂಗ್ ಮಾಡುವಾಗ ಪ್ರೇಕ್ಷಕರು ಕೋತಿ, ಹುಳು ಎಂಬುದಾಗಿ ಜನಾಂಗೀಯವಾಗಿ ನಿಂದಿಸಿದ್ದರು. ಪಂದ್ಯದ ಬಳಿಕ ಸಿರಾಜ್ ಐಸಿಸಿ ಮ್ಯಾಚ್ ರೆಫರಿಗೆ ದೂರು ನೀಡಿದ್ದರು. ದೂರನ್ನು ಆಧರಿಸಿ ಕ್ರಿಕೆಟ್ ಆಸ್ಟ್ರೇಲಿಯಾವು ನ್ಯೂ ಸೌತ್ ವೇಲ್ಸ್ ಪೊಲೀಸರ ಮೂಲಕ ತನಿಖೆ ಆರಂಭಿಸಿತ್ತು.

ಕುಚೇಷ್ಟೆ ಮಾಡಿದ 6 ಾಸ್ಟ್ರೇಲಿಯಾ ಪ್ರೇಕ್ಷಕರನ್ನು ಮೈದಾನದಿಂದ ಹೊರದಬ್ಬಿ ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ, ಇದಿಗ ಆರೋಪ ಸಾಬೀತುಪಡಿಸುವ ಯವುದೇ ಸಾಕ್ಷ್ಯ ಸಿಕ್ಕಿಲ್ಲ ಎಂದು ವರದಿಯಾಗಿದೆ.

ADVERTISEMENT

ಭಾರತೀಯ ಆಟಗಾರರನ್ನು ಜನಾಂಗೀಯವಾಗಿ ನಿಂದಿಸಲಾಗಿದೆ ಎಂದು ನಂಬಲಾಗಿದೆ. ಆದರೆ, ತನಿಖಾಧಿಕಾರಿಗಳಿಗೆ ಅಪರಾಧವನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ವರದಿಯಲ್ಲಿ ಉಲ್ಲೇಖಿಸಿರುವುದಾಗಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆ ಹೆಸರಿಸದ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ಜಾಗತಿಕ ಕ್ರಿಕೆಟ್ ಆಡಳಿತ ಮಂಡಳಿ ಐಸಿಸಿಗೆ ಕ್ರಿಕೆಟ್ ಆಸ್ಟ್ರೇಲಿಯಾವು ವರದಿ ಸಲ್ಲಿಸಿದೆ. ಈ ಬಗ್ಗೆ ರಾಯಿಟರ್ಸ್ ಕ್ರಿಕೆಟ್ ಆಸ್ಟ್ರೇಲಿಯಾವನ್ನು ಸಂಪರ್ಕಿಸಿದಾಗ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್–ಗವಾಸ್ಕರ್ ಸರಣಿ ಸಂದರ್ಭ ಕೇಳಿ ಬಂದ ಈ ಜನಾಂಗೀಯ ನಿಂದನೆ ಕರಿ ನೆರಳು ಆಸ್ಟ್ರೇಲಿಯಾದ ಅಭಿಮಾನಿಗಳ ಕೆಟ್ಟ ವರ್ತನೆಗೆ ಮತ್ತೊಮ್ಮೆ ಸಾಕ್ಷಿಯಾಗಿತ್ತು. ಮೈದಾನದಲ್ಲಿ ಕ್ರಿಕೆಟಿಗರನ್ನು ಕೋತಿ, ಹುಳು ಎಂದೆಲ್ಲ ನಿಂದಿಸಲಾಗಿತ್ತು. ವಿರಾಟ್ ಕೊಹ್ಲಿ ಸೇರಿದಂತೆ ಹಲವು ಕ್ರಿಕೆಟಿಗರಿಂದ ಆಕ್ಷೇಪ ವ್ಯಕ್ತವಾಗಿತ್ತು. ಬಿಸಿಸಿಐ ದೂರು ದಾಖಲಿಸಿ ತನಿಖೆಗೆ ಒತ್ತಾಯಿಸಿತ್ತು.

ಈ ಸರಣಿಯನ್ನು ಭಾರತ 2–1 ರಿಂದ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.