ADVERTISEMENT

ಎಂಜಲು ನಿಷೇಧ ಮಧ್ಯಂತರ ಕ್ರಮ ಮಾತ್ರ: ಕುಂಬ್ಳೆ

ಪಿಟಿಐ
Published 24 ಮೇ 2020, 17:13 IST
Last Updated 24 ಮೇ 2020, 17:13 IST
ಅನಿಲ್ ಕುಂಬ್ಳೆ
ಅನಿಲ್ ಕುಂಬ್ಳೆ   

ನವದೆಹಲಿ:ಕ್ರಿಕೆಟ್ ಪಂದ್ಯದಲ್ಲಿ ಎಂಜಲು ಬಳಕೆ ನಿಷೇಧ ನಿಯಮವು ತಾತ್ಕಾಲಿಕವಾಗಿದೆ. ಒಂದೊಮ್ಮೆ ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಿದ ನಂತರ ನಿಯಮ ಕೈಬಿಡಬಹುದು ಎಂದು ಐಸಿಸಿ ಕ್ರಿಕೆಟ್ ಸಮಿತಿ ಮುಖ್ಯಸ್ಥ ಅನಿಲ್ ಕುಂಬ್ಳೆ ಹೇಳಿದ್ದಾರೆ.

ಕೊರೊನಾ ವೈರಸ್‌ ಸೋಂಕು ತಡೆಯಲು ಚೆಂಡಿಗೆ ಎಂಜಲು ಬಳಕೆ ಮಾಡುವುದು ಬೇಡ ಎಂದು ಈಚೆಗೆ ಕುಳಬ್ಳೆ ನೇತೃತ್ವ ಸಮಿತಿಯು ಶಿಫಾರಸು ಮಾಡಿತ್ತು. ಆದರೆ ಅದಕ್ಕೆ ಕೆಲವು ಬೌಲರ್‌ಗಳು ಎಂಜಲು ಬಳಕೆ ನಿಷೇಧ ಬೇಡ ಎಂದು ಪ್ರತಿಕ್ರಿಯಿಸಿದರು.

’ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ಈ ಶಿಫಾರಸು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕೋವಿಡ್ ಹತೋಟಿಗೆ ಬರುವ ವಿಶ್ವಾಸ ಇದೆ. ಕೆಲವು ತಿಂಗಳುಗಳಲ್ಲಿ ಅಂತಹದೊಂದು ಸುಧಾರಣೆ ಆದ ನಂತರ ನಾವು ಮತ್ತೆ ಮರಳಿ ಹಳೆಯ ಹಾದಿಗೆ ಮರಳುತ್ತೇವೆ‘ ಎಂದು ಅನಿಲ್ ;ಸ್ಟಾರ್ ಸ್ಪೋರ್ಟ್ಸ್‌‘ನ ಕ್ರಿಕೆಟ್ ಕನೆಕ್ಟಡ್‌ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ADVERTISEMENT

’ಕ್ರಿಕೆಟ್ ಇತಿಹಾಸವನ್ನು ನೋಡಿದರೆ, ನಾವು ಇದುವರೆಗೂ ಚೆಂಡಿನ ಹೊಳಪನ್ನು ಉಳಿಸಿಕೊಳ್ಳಲು ಕೃತಕ ವಸ್ತುಗಳನ್ನು ಬಳಸುವುದರ ಮೇಲೆ ನಿಷೇಧ ಹೇರಿದ್ದೇವೆ. ಆದರೆ ಅದನ್ನು ಈಗ ಕಾನೂನು ಬದ್ಧಗೊಳಿಸುವುದು ಅಥವಾ ಆ ಬಗ್ಗೆ ಚಿಂತಿಸುವುದು ಆಟದ ಮೇಲೆ ಏನು ಪರಿಣಾಮ ಬೀರಬಹುದು. ಹೋದ ಕೆಲವು ವರ್ಷಗಳ ಈ ಬಗ್ಗೆ ಆಗಿರುವ ಪರಿಣಾಮ ನೋಡಿದ್ದೇವೆ‘ ಎಂದು ವ್ಯಾಕ್ಸ್‌ ಬಳಕೆಯ ಕುರಿತು ಪ್ರತಿಕ್ರಿಯಿಸಿದರು.

2018ರಲ್ಲಿ ಆಸ್ಟ್ರೆಲಿಯಾದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಕ್ಯಾಮರಾನ್ ಬ್ಯಾಂಕ್ರಾಫ್ಟ್‌ ಅವರು ಚೆಂಡು ವಿರೂಪಗೊಳಿಸಿದ್ದ ಕಾರಣಕ್ಕೆ ಒಂದು ವರ್ಷದ ನಿಷೇಧ ಶಿಕ್ಷೆ ಅನುಭವಿಸಿದ್ದರು.

’ಆ ಪ್ರಕರಣದಲ್ಲಿ ಐಸಿಸಿಯು ಕ್ರಮ ಕೈಗೊಂಡಿತ್ತು. ಆದರೂ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆಯು ಮತ್ತಷ್ಟು ಕಠಿಣ ನಿಲುವು ತಳೆಯಿತು. ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಣ ಆ ಟೆಸ್ಟ್‌ನ ಆ ಘಟನೆಯನ್ನು ನಾವು ಈಗ ಅವಲೋಕಿಸಬೇಕು‘ ಎಂದು ಕುಂಬ್ಳೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.