ADVERTISEMENT

ಬಿಹಾರ ಪ್ರವಾಹ ನಿಧಿಗಾಗಿ ರಾಹುಲ್ ಬ್ಯಾಟ್‌ ಹರಾಜು

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 21:19 IST
Last Updated 31 ಜುಲೈ 2020, 21:19 IST
ಕೆ.ಎಲ್. ರಾಹುಲ್
ಕೆ.ಎಲ್. ರಾಹುಲ್   

ಬೆಂಗಳೂರು: ಕರ್ನಾಟಕದ ಕೆ.ಎಲ್. ರಾಹುಲ್, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತಿತರ ಆಟಗಾರರು ಬಿಹಾರ ಮತ್ತು ಅಸ್ಸಾಂ ಪ್ರವಾಹ ಸಂತ್ರಸ್ತರ ನಿಧಿಗೆ ಸಹಾಯಹಸ್ತ ಚಾಚಿದ್ದಾರೆ.

ರಾಹುಲ್ ಅವರು ತಮ್ಮ ಬ್ಯಾಟ್‌ ಹರಾಜಿಗಿಟ್ಟಿದ್ದು, ಅದರಿಂದ ಬರುವ ಹಣವನ್ನು ಪರಿಹಾರ ನಿಧಿಗೆ ನೀಡಲಿದ್ದಾರೆ. ಕುಲದೀಪ್ ಯಾದವ್ ತಮ್ಮ ಹ್ಯಾಟ್ರಿಕ್ ಸಾಧನೆಯ ಚೆಂಡು, ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಸಿಂಗ್ ತಮ್ಮ ಕ್ರಿಕೆಟ್ ಪೋಷಾಕು, ಸಾನಿಯಾ ಅವರು ಟೆನಿಸ್ ರೆಕೆಟ್ ಮತ್ತು ವೃದ್ಧಿಮಾನ್ ಸಹಾ ಅವರು ಟೀಶರ್ಟ್ ಹರಾಜಿಗಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಸಂದೇಶ ನೀಡಿರುವ ಎಲ್ಲರೂ ಪರಿಹಾರ ನಿಧಿಗೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.

ಆದರೆ ರಾಹುಲ್ ಅವರ ಈ ನಡೆಗೆ ಫೇಸ್‌ಬುಕ್‌ನಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೋದ ವರ್ಷ ಕರ್ನಾಟಕದಲ್ಲಿ ಭೀಕರ ಪ್ರವಾಹ ಬಂದಾಗ ಎಲ್ಲಿ ಹೋಗಿದ್ದರು. ಆಗ ಏಕೆ ಈ ಕೆಲಸ ಮಾಡಲಿಲ್ಲ ಎಂದು ರಾಮಚಂದ್ರ ಮಹಾರುದ್ರಪ್ಪ ಅವರು ಹಾಕಿರುವ ಪೋಸ್ಟ್‌ಗೆ ಬಹಳಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.