ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಆಡಳಿತ ಸಮಿತಿಯ ಮುಖ್ಯಸ್ಥ ಅರುಣಸಿಂಗ್ ಧುಮಾಲ್ ಮತ್ತು ಬಂಗಾಳ ಕ್ರಿಕೆಟ್ ಸಂಸ್ಥೆ ನಿಕಟಪೂರ್ವ ಅಧ್ಯಕ್ಷ ಅವಿಷೇಕ್ ದಾಲ್ಮಿಯಾ ಅವರನ್ನು ಐಪಿಎಲ್ ಸಮಿತಿಗೆ ಪುನರಾಯ್ಕೆ ಮಾಡಲಾಗಿದೆ.
ಗೋವಾದಲ್ಲಿ ಸೋಮವಾರ ನಡೆದ ಬಿಸಿಸಿಐ (ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ) ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಐಪಿಎಲ್ ಸಮಿತಿಗೆ ದಾಲ್ಮಿಯಾ ಮತ್ತು ಧುಮಾಲ್ ಅವರನ್ನು ಪುನರಾಯ್ಕೆ ಮಾಡಲಾಯಿತು.
‘ಸಭೆಯಲ್ಲಿ ಎಂದಿನಂತೆ ನಿಗದಿಯಾದ ಎಲ್ಲ ಸಂಗತಿಗಳೂ ಚರ್ಚೆಯಾದವು. ತೀರ್ಮಾನಗಳನ್ನೂ ಕೈಗೊಳ್ಳಲಾಯಿತು. ಕ್ರಿಕೆಟ್ ಸಮಿತಿಗಳಿಗೆ ನಾಮನಿರ್ದೇಶನವನ್ನು ಪದಾಧಿಕಾರಿಗಳು ಸಿದ್ಧಪಡಿಸಿದರು. ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಲ್ ಮತ್ತು ಅವಿಶೇಕ್ ದಾಲ್ಮಿಯಾ ಅವರನ್ನು ನಿರೀಕ್ಷೆಯಂತೆಯೇ ಆಯ್ಕೆ ಮಾಡಲಾಯಿತು‘ ಎಂದು ಮೂಲಗಳು ಖಚಿತಪಡಿಸಿದವು.
ಸದ್ಯ ಇರುವ ಒಂಬುಡ್ಸ್ಮನ್ –ನೈತಿಕ ಅಧಿಕಾರಿಯನ್ನು ಮುಂದಿನ ವರ್ಷದ ಜೂನ್ವರೆಗೆ ಮುಂದುವರಿಸಲು ತೀರ್ಮಾನಿಸಲಾಯಿತು.
ಕಳೆದ ವರ್ಷದಲ್ಲಿ ಬಿಸಿಸಿಐ ಆದಾಯದಲ್ಲಿ ಗಣನೀಯ ಪ್ರಮಾಣದ ಹೆಚ್ಚಳವಾಗಿದೆ. ಐಸಿಸಿಯ ಆದಾಯಕ್ಕಿಂತಲೂ ಶೇ 38ರಷ್ಟು ಹೆಚ್ಚು ಬಿಸಿಸಿಐ ಗಳಿಕೆಯಿದೆ. ಮುಂಬರುವ ಐದು ವರ್ಷಗಳಲ್ಲಿ ನಡೆಯುವ ದ್ವಿಪಕ್ಷೀಯ ಸರಣಿಗಳ ಮಾಧ್ಯಮ ಹಕ್ಕುಗಳನ್ನು ಈಚೆಗೆ ಬಿಡ್ ಮಾಡಲಾಗಿದೆ. ಅದರಲ್ಲಿ ಪಂದ್ಯವೊಂದಕ್ಕೆ ಅಂದಾಜು ₹ 67 ಕೋಟಿಯನ್ನು ನಿರೀಕ್ಷಿಸಲಾಗಿದೆ. ಇದಕ್ಕೆ ಸದಸ್ಯರು ಸಂತಸ ವ್ಯಕ್ತಪಡಿಸಿದರು.
ಭಾರತ ಕ್ರಿಕೆಟಿಗರ ಸಂಘಟನೆಯಲ್ಲಿ ಪ್ರಗ್ಯಾನ್ ಓಜಾ ಅವರು ಮುಂದುವರಿಯುವುದಿಲ್ಲ. ಆದ್ದರಿಂದ ಅಪೆಕ್ಸ್ ಕೌನ್ಸಿಲ್ನಲ್ಲಿಯೂ ಅವರು ಇರುವುದಿಲ್ಲ.
‘ಐಸಿಎ ಚುನಾವಣೆ ನಡೆಯಲಿದೆ. ಅದರಲ್ಲಿ ನೂತನ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುವುದು‘ ಎಂದು ಮೂಲಗಳು ತಿಳಿಸಿವೆ.
Highlights - null
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.