ಕೋಲ್ಕತ್ತ: ಭರವಸೆಯ ಆಲ್ರೌಂಡರ್ ಅನಿಕೇತ್ ಶರ್ಮಾ, ಮಂಗಳವಾರ ಕ್ರಿಕೆಟ್ ಅಂಗಳದಲ್ಲೇ ಅಸು ನೀಗಿದ್ದಾರೆ.
21 ವರ್ಷದ ಅನಿಕೇತ್, ಹೃದಯ ಸ್ಥಂಭನದಿಂದಾಗಿ ನಿಧನರಾಗಿದ್ದಾರೆ ಎಂದು ಆರ್.ಜಿ.ಕರ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
‘ಮಂಗಳವಾರ ಮೈದಾನದಲ್ಲಿ ‘ವಾರ್ಮ್ ಅಪ್’ ಮಾಡುವ ವೇಳೆ ಅನಿಕೇತ್ ಇದ್ದಕ್ಕಿದ್ದಂತೆ ಕುಸಿದು ಬಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಕುಸಿದು ಬಿದ್ದ ಕೆಲ ಕ್ಷಣಗಳಲ್ಲೇ ಆತನ ಉಸಿರು ನಿಂತಿದೆ ಎಂದು ವೈದ್ಯರು ಹೇಳಿದಾಗ ನಮಗೆ ಆಘಾತವಾಯಿತು’ ಎಂದು ಸಹ ಆಟಗಾರನೊಬ್ಬ ತಿಳಿಸಿದ್ದಾನೆ.
‘ಹೋದ ವರ್ಷ ಅನಿಕೇತ್ ನಮ್ಮ ಕ್ಲಬ್ಗೆ ಸೇರಿದ್ದ. ಆತ ಪ್ರತಿಭಾನ್ವಿತ ಆಲ್ರೌಂಡರ್ ಆಗಿದ್ದ. ಆತನ ನಿಧನದ ಸುದ್ದಿ ಕೇಳಿ ಆಘಾತವಾಗಿದೆ’ ಎಂದು ಪಯಿಕಪರಾ ಕ್ಲಬ್ನ ಕೋಚ್ ತಿಳಿಸಿದ್ದಾರೆ.
‘ಅನಿಕೇತ್ ಸಾವಿಗೀಡಾದ ಸುದ್ದಿ ತಿಳಿದು ತುಂಬಾ ಬೇಸರವಾಗಿದೆ. ಆತನ ನಿಧನದ ಕಾರಣ, ಬುಧವಾರ ನಡೆಯಬೇಕಿದ್ದ ಪಯಿಕಪರಾ ಮತ್ತು ಮಿಲಾನ್ ಸಮಿತಿ ನಡುವಣ ಮೊದಲ ಡಿವಿಷನ್ ಲೀಗ್ ಪಂದ್ಯವನ್ನು ಮುಂದೂಡಿದ್ದೇವೆ’ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆಯ (ಸಿಎಬಿ) ಜಂಟಿ ಕಾರ್ಯದರ್ಶಿ ಅಭಿಷೇಕ್ ದಾಲ್ಮಿಯಾ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.