ಕಟಕ್ (ಪಿಟಿಐ): ಭಾರತದ ಮಧ್ಯಮ ವೇಗದ ಬೌಲರ್ ದೀಪಕ್ ಚಾಹರ್ ಅವರು ಗಾಯದಿಂದಾಗಿ ವೆಸ್ಟ್ ಇಂಡೀಸ್ ಎದುರಿನ ಮೂರನೇ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ಚಾಹರ್ ಬದಲು ನವದೀಪ್ ಸೈನಿ ಅವರು ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ಟ್ವೆಂಟಿ–20 ಮಾದರಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತದ ಏಕೈಕ ಬೌಲರ್ ಎಂಬ ಹಿರಿಮೆ ಹೊಂದಿರುವ ದೀಪಕ್ ಅವರು ವಿಂಡೀಸ್ ಎದುರಿನ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಆಡಿದ್ದರು.
‘ವಿಶಾಖಪಟ್ಟಣದಲ್ಲಿ ನಡೆದಿದ್ದ ಎರಡನೇ ಪಂದ್ಯದ ವೇಳೆ ದೀಪಕ್ ಬೆನ್ನು ನೋವಿನಿಂದ ಬಳಲಿದ್ದರು. ಅವರಿಗೆ ಚಿಕಿತ್ಸೆ ನೀಡಿದ್ದ ವೈದ್ಯಕೀಯ ತಂಡ ಕೆಲಕಾಲ ವಿಶ್ರಾಂತಿ ಪಡೆಯಲು ಸೂಚಿಸಿದೆ. ಹೀಗಾಗಿ ಅವರು ಮೂರನೇ ಪಂದ್ಯದಲ್ಲಿ ಕಣಕ್ಕಿಳಿಯುತ್ತಿಲ್ಲ’ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಪ್ರಕಟಣೆಯಲ್ಲಿ ತಿಳಿಸಿದೆ.
ಈ ವರ್ಷದ ಆರಂಭದಲ್ಲಿ ಟ್ರಿನಿಡಾಡ್ ಮತ್ತು ಫ್ಲೋರಿಡಾದಲ್ಲಿ ನಡೆದಿದ್ದ ವಿಂಡೀಸ್ ಎದುರಿನ ಮೂರು ಪಂದ್ಯಗಳ ಟ್ವೆಂಟಿ–20 ಸರಣಿಯಲ್ಲಿ 27 ವರ್ಷ ವಯಸ್ಸಿನ ನವದೀಪ್ ಆಡಿದ್ದರು. ಈ ಸರಣಿಯಲ್ಲಿ ಅವರು ಒಟ್ಟು ಐದು ವಿಕೆಟ್ ಉರುಳಿಸಿ ಗಮನ ಸೆಳೆದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.