ಬೆಂಗಳೂರು: ‘ಕೆಲವು ಪಂದ್ಯಗಳಲ್ಲಿ ಸಣ್ಣ ಅಂತರದಲ್ಲಿ ಸೋತಿದ್ದೇವೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಕೊನೆಯ ವರೆಗೂ ಆತಂಕ ಮನೆ ಮಾಡಿತ್ತು. ಮಹೇಂದ್ರ ಸಿಂಗ್ ಧೋನಿ ಏನನ್ನು ಮಾಡಬೇಕಿತ್ತೋ ಅದನ್ನು ಮಾಡಿ ತೋರಿಸಿದ್ದರು...’
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಭಾನುವಾರದ ರೋಚಕ ಪಂದ್ಯದ ನಂತರ ಎದುರಾಳಿ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಆಡಿದ ಮೆಚ್ಚುಗೆಯ ಮಾತುಗಳು ಇವು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್ಸಿಬಿ ಒಂದು ರನ್ನಿಂದ ಗೆದ್ದಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ಸಿಬಿ ಏಳು ವಿಕೆಟ್ಗಳಿಗೆ 161 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಸೂಪರ್ ಕಿಂಗ್ಸ್ ಸತತ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ಧೋನಿ ಕ್ರೀಸ್ನಲ್ಲಿ ತಳವೂರಿ ಎದುರಾಳಿ ಬೌಲರ್ಗಳಲ್ಲಿ ಆತಂಕ ಮೂಡಿಸಿದ್ದರು. 48 ಎಸೆತಗಳಲ್ಲಿ 84 ರನ್ ಗಳಿಸಿ ಅಜೇಯರಾಗಿ ಉಳಿದ ಅವರು ಏಳು ಸಿಕ್ಸರ್ ಮತ್ತು ಐದು ಬೌಂಡರಿ ಸಿಡಿಸಿದ್ದರು.
ಉಮೇಶ್ ಯಾದವ್ ಹಾಕಿದ್ದ ಕೊನೆಯ ಓವರ್ನಲ್ಲಿ ಸೂಪರ್ ಕಿಂಗ್ಸ್ ಗೆಲುವಿಗೆ 26 ರನ್ಗಳು ಬೇಕಾಗಿದ್ದವು. 24 ರನ್ ಗಳಿಸಿದ್ದ ತಂಡ ಕೊನೆಯ ಎಸೆತದಲ್ಲಿ ಎಡವಿತ್ತು. ಕ್ರೀಸ್ನಲ್ಲಿದ್ದ ಧೋನಿ ಬೀಟ್ ಆಗಿದ್ದರು. ಮತ್ತೊಂದು ತುದಿಯಲ್ಲಿದ್ದ ಶಾರ್ದೂಲ್ ಠಾಕೂರ್ ಅವರನ್ನು ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ರನ್ ಔಟ್ ಮಾಡಿದ್ದರು.
‘19ನೇ ಓವರ್ನಲ್ಲಿ ನಿಜವಾಗಿ ಪಂದ್ಯಕ್ಕೆ ತಿರುವು ಲಭಿಸಿತ್ತು. ಧೋನಿ ಅವರನ್ನು ನವದೀಪ್ ಸೈನಿ ಕಟ್ಟಿ ಹಾಕಿದ್ದರಿಂದ ಕೊನೆಯ ಓವರ್ ರೋಚಕವಾಯಿತು. ಸೂಪರ್ ಕಿಂಗ್ಸ್ನಂಥ ತಂಡದ ವಿರುದ್ಧ ಆಡುವಾಗ ತುಂಬ ಜಾಗರೂಕರಾಗಿರಬೇಕು. ನಮ್ಮ ತಂಡದ ಬೌಲರ್ಗಳು ಇದನ್ನು ಗಮನದಲ್ಲಿಟ್ಟುಕೊಂಡೇ ದಾಳಿ ನಡೆಸಿದರು. ಸೈನಿ ಈ ವರ್ಷ ಮೊದಲ ಬಾರಿ ಐಪಿಎಲ್ ಆಡುತ್ತಿದ್ದಾರೆ. ಈ ವರೆಗೆ ಅವರು ಉತ್ತಮ ಸಾಮರ್ಥ್ಯ ತೋರಿದ್ದಾರೆ. ಅವರಿಗೆ ಉತ್ತಮ ಭವಿಷ್ಯವಿದೆ’ ಎಂದು ಕೊಹ್ಲಿ ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.