ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಎದುರಿನ ಟ್ವೆಂಟಿ–20 ಸರಣಿಗೆ ಭಾರತ ತಂಡದ ಆಯ್ಕೆಯನ್ನು ಸೆಪ್ಟೆಂಬರ್ 4ರಂದು ಮಾಡಲಾಗುವುದು. ಆದರೆ ವಿಕೆಟ್ ಕೀಪರ್ ಮಹೇಂದ್ರಸಿಂಗ್ ಧೋನಿ ಅವರನ್ನು ಆಯ್ಕೆಗೆ ಪರಿಗಣಿಸದೇ ಯುವ ಆಟಗಾರ ರಿಷಭ್ ಪಂತ್ ಅವರಿಗೆ ಮಣೆ ಹಾಕುವ ಸಾಧ್ಯತೆ ಇದೆ.
ಮೂರು ಟ್ವೆಂಟಿ–20 ಪಂದ್ಯಗಳ ಸರಣಿಯ ಮೊದಲ ಪಂದ್ಯವು ಸೆ 15ರಂದು ಧರ್ಮಶಾಲಾದಲ್ಲಿ, ಎರಡನೇ ಪಂದ್ಯವು ಮೊಹಾಲಿ (ಸೆ 18) ಮತ್ತು ಬೆಂಗಳೂರಿನಲ್ಲಿ (ಸೆ 22) ನಡೆಯಲಿದೆ.
ಈಚೆಗೆ ವೆಸ್ಟ್ ಇಂಡೀಸ್ನಲ್ಲಿ ನಡೆದ ಸರಣಿಯಲ್ಲಿ 3–0ಯಿಂದ ಗೆದ್ದಿದ್ದ ವಿರಾಟ್ ಕೊಹ್ಲಿ ನಾಯಕತ್ವದ ಬಳಗವನ್ನೇ ಇಲ್ಲಿಯ ಸರಣಿಗೂ ಉಳಿಸಿಕೊಳ್ಳುವ ಸಾಧ್ಯತೆ ಇದೆ. ವಿಂಡೀಸ್ ಸರಣಿಯಲ್ಲಿ ಧೋನಿ ಆಡಿರಲಿಲ್ಲ. ಸೇನೆಯಲ್ಲಿ ಗೌರವ ಕರ್ನಲ್ ಆಗಿರುವ ಧೋನಿ ಅವರು ಜಮ್ಮು–ಕಾಶ್ಮೀರದಲ್ಲಿ ಕೆಲವು ದಿನಗಳ ಸೇವೆ ಸಲ್ಲಿಸಲು ತೆರಳಿದ್ದರು.
‘ಮುಂದಿನ ವರ್ಷ ನಡೆಯಲಿರುವ ಟ್ವೆಂಟಿ–20 ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ತಂಡವು ಕೇವಲ 22 ಪಂದ್ಯಗಳನ್ನು ಆಡಲಿದೆ. ಆದ್ದರಿಂದ ಆಯ್ಕೆ ಸಮಿತಿಯು ತಂಡವನ್ನು ಸಿದ್ಧಗೊಳಿಸಲಿದೆ. ಹೆಚ್ಚು ಪ್ರಯೋಗಗಳಿಗೆ ಆಸ್ಪದ ಕೊಡುವುದು ಅನುಮಾನ. ಮೂವರು ಕೀಪರ್ಗಳನ್ನು ಆಡಿಸುವ ಸಾಧ್ಯತೆ ಇದೆ’ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.