ADVERTISEMENT

ಆತ್ಮಸಾಕ್ಷಿಗೆ ನ್ಯಾಯ ಒದಗಿಸಿರುವೆ: ಕಾರ್ತಿಕ್

ಪಿಟಿಐ
Published 6 ಏಪ್ರಿಲ್ 2022, 12:55 IST
Last Updated 6 ಏಪ್ರಿಲ್ 2022, 12:55 IST
ದಿನೇಶ್ ಕಾರ್ತಿಕ್ –ಪಿಟಿಐ ಚಿತ್ರ
ದಿನೇಶ್ ಕಾರ್ತಿಕ್ –ಪಿಟಿಐ ಚಿತ್ರ   

ಮುಂಬೈ: ‘ನನ್ನ ಆತ್ಮಸಾಕ್ಷಿಗೆ ನ್ಯಾಯ ಒದಗಿಸಲು ಪ್ರಾಮಾಣಿಕ ಮತ್ತು ಪ್ರಜ್ಞಾಪೂರ್ವಕ ಪ್ರಯತ್ನ ಮಾಡಿದ್ದೇನೆ. ಇದರ ಫಲವಾಗಿ ಹಿಂದಿನ ಕೆಲವು ವರ್ಷಗಳಲ್ಲಿ ಉತ್ತಮ ಸಾಮರ್ಥ್ಯ ತೋರಲು ಸಾಧ್ಯವಾಗಿದೆ’ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟರು.

ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ರಾಜಸ್ಥಾನ್ ರಾಯಲ್ಸ್ ಎದುರಿನ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಮತ್ತು ಶಹಬಾಜ್ ನದೀಮ್ ಅವರ ಹೋರಾಟಕಾರಿ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ 4 ವಿಕೆಟ್‌ಗಳ ಜಯ ಸಾಧಿಸಿತ್ತು.

170 ರನ್‌ಗಳ ಗುರಿ ಬೆನ್ನಟ್ಟಿದ್ದ ಆರ್‌ಸಿಬಿ 13 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 87 ರನ್ ಗಳಿಸಿ ಸೋಲಿನ ಆತಂಕ ಎದುರಿಸಿತ್ತು. ಈ ಹಂತದಲ್ಲಿ ಜೊತೆಗೂಡಿದ ಶಾಬಾಜ್ (45; 28ಎ, 4X4, 6X3) ಮತ್ತು ದಿನೇಶ್ (ಔಟಾಗದೆ 44; 23ಎ, 4X7, 6X1) ಆರನೇ ವಿಕೆಟ್‌ಗೆ32 ಎಸೆತಗಳಲ್ಲಿ 67 ರನ್‌ ಸೂರೆ ಮಾಡಿದ್ದರು.

ADVERTISEMENT

‘ನನಗೆ ಸಿಕ್ಕಿದ ತರಬೇತಿ ವಿಶಿಷ್ವವಾಗಿತ್ತು. ಪ್ರತಿ ಪಂದ್ಯ ಮುಗಿದ ನಂತರವೂ ಸಂಪೂರ್ಣ ಸಾಮರ್ಥ್ಯ ಸಾಬೀತು ಮಾಡಲು ಸಾಧ್ಯವಾಗಲಿಲ್ಲ ಎಂದು ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ. ನನಗೊಂದು ಗುರಿ ಇದೆ. ಅದನ್ನು ಸಾಧಿಸುವ ಪ್ರಯತ್ನದಲ್ಲಿದ್ದೇನೆ’ ಎಂದು ದಿನೇಶ್ ಕಾರ್ತಿಕ್ ಹೇಳಿದರು.

ನೇಥನ್ ಕಾಲ್ಟರ್‌ನೈಲ್ ಅಲಭ್ಯ

ನವದೆಹಲಿ (ಪಿಟಿಐ): ರಾಜಸ್ಥಾನ್ ರಾಯಲ್ಸ್‌ನಲ್ಲಿ ಆಡುತ್ತಿರುವ ಆಸ್ಟ್ರೇಲಿಯಾದ ವೇಗದ ಬೌಲಿಂಗ್ ಆಲ್‌ರೌಂಡರ್ ನೇಥನ್ ಕಾಲ್ಟರ್‌ನೈಲ್ ಅವರು ಐಪಿಎಲ್‌ನ ಉಳಿದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಎದುರು ನಡೆದ ಪಂದ್ಯದಲ್ಲಿ ಅವರು ಪಕ್ಕೆಲುಬಿನ ಗಾಯಕ್ಕೆ ಒಳಗಾಗಿದ್ದರು.

‘34 ವರ್ಷದ ನೇಥನ್ ಚಿಕಿತ್ಸೆ ಮತ್ತು ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳುವುದಕ್ಕಾಗಿ ತಾಯ್ನಾಡಿಗೆ ಮರಳಿದ್ದಾರೆ. ಬೇಗನೇ ಗುಣಮುಖರಾಗಲಿ ಎಂದು ಹಾರೈಸುತ್ತೇನೆ’ ಎಂಬುದಾಗಿ ತಂಡದ ಫಿಜಿಯೊ ಜಾನ್ ಗ್ಲಾಸ್ಟರ್ ಅವರು ಟ್ವೀಟ್ ಮಾಡಿರುವ ವಿಡಿಯೊದಲ್ಲಿ ಹೇಳಿದ್ದಾರೆ.

ಆಟಗಾರರ ಹರಾಜಿನಲ್ಲಿ ನೇಥನ್ ಅವರನ್ನು ರಾಜಸ್ಥಾನ್ ರಾಯಲ್ಸ್ ₹ 2 ಕೋಟಿ ಮೊತ್ತಕ್ಕೆ ಖರೀರಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.