ಸಂಗ್ರಹ ಚಿತ್ರ
ಸಿಲ್ಹೆಟ್ (ಬಾಂಗ್ಲಾದೇಶ): ಎಡಗೈ ಸ್ಪಿನ್ನರ್ ರಾಧಾ ಯಾದವ್ (19ಕ್ಕೆ3) ಮತ್ತು ದಯಾಳನ್ ಹೇಮಲತಾ (ಔಟಾಗದೇ 41, 24ಎ, 4x5, 6x2) ಅವರ ಉತ್ತಮ ಪ್ರದರ್ಶನದ ನೆರವಿನಿಂದ ಭಾರತ ತಂಡ ಮಂಗಳವಾರ ನಡೆದ ಮಹಿಳೆಯರ ಎರಡನೇ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಸೋಲಿಸಿತು. ಮಳೆಯಿಂದಾಗಿ ಡಕ್ವರ್ಥ್ ಲೂಯಿಸ್ ನಿಯಮದಡಿ ಇತ್ಯರ್ಥವಾದ ಪಂದ್ಯದಲ್ಲಿ ಭಾರತ 19 ರನ್ಗಳಿಂದ ಗೆಲುವು ಪಡೆಯಿತು.
ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ಆತಿಥೇಯರು, ಭಾರತದ ಸ್ಪಿನ್ ದಾಳಿಗೆ ಸಿಲುಕಿ 20 ಓವರುಗಳಲ್ಲಿ 119 ರನ್ಗಳಿಗೆ ಆಲೌಟ್ ಆದರು. ರಾಧಾ ಅವರಿಗೆ ಬೆಂಬಲ ನೀಡಿದ ಆಫ್ ಸ್ಪಿನ್ನರ್ಗಳಾದ ದೀಪ್ತಿ ಶರ್ಮಾ ಮತ್ತು ಶ್ರೇಯಾಂಕಾ ಪಾಟೀಲ ಅವರು ತಲಾ ಎರಡು ವಿಕೆಟ್ ಪಡೆದರು.
ಬಾಂಗ್ಲಾ ಪರ ಆರಂಭ ಆಟಗಾರ್ತಿ ಮುರ್ಷಿದಾ ಖಾತುನ್ ಅತ್ಯಧಿಕ ರನ್– 49 ಎಸೆತಗಳಲ್ಲಿ 46 ರನ್ ಗಳಿಸಿದರು.
ಭಾರತ ತಂಡ, ಶಫಾಲಿ ವರ್ಮಾ (0) ಅವರ ವಿಕೆಟ್ ಬೇಗನೇ ಕಳೆದುಕೊಂಡರೂ, ಹೇಮಲತಾ ಬಿರುಸಿನ ಆಟವಾಡಿ 24 ಎಸೆತಗಳಲ್ಲಿ 41 ರನ್ ಸಿಡಿಸಿದರು. ಭಾರತ 1 ವಿಕೆಟ್ಗೆ 47 ರನ್ ಗಳಿಸಿದ್ದಾಗ ಎರಡನೇ ಬಾರಿ ಮಳೆಯಿಂದ ಪಂದ್ಯಕ್ಕೆ ಅಡ್ಡಿಯಾಯಿತು. ನಂತರ ಆಟ ಮುಂದುವರಿಯಲಿಲ್ಲ. ಆ ವೇಳೆ ಭಾರತ ಡಕ್ವರ್ಥ –ಲೂಯಿಸ್ ನಿಯಮದ ಪ್ರಕಾರ 19 ರನ್ಗಳಿಂದ ಮುಂದಿತ್ತು.
ಭಾರತ ವನಿತೆಯರು ಐದು ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಸಾಧಿಸಿದರು.
ಸ್ಕೋರುಗಳು: ಬಾಂಗ್ಲಾದೇಶ: 20 ಓವರುಗಳಲ್ಲಿ 119 (ಮುರ್ಷಿದಾ ಖಾತುನ್ 46, ಶೋಭನಾ ಮೊಸ್ತಾರಿ 19, ರಿತು ಮೋನಿ 20; ದೀಪ್ತಿ ಶರ್ಮಾ 14ಕ್ಕೆ2, ಪೂಜಾ ವಸ್ತಾಕರ್ 21ಕ್ಕೆ1, ಶ್ರೇಯಾಂಕಾ ಪಾಟೀಲ 24ಕ್ಕೆ2, ರಾಧಾ ಯಾದವ್ 19ಕ್ಕೆ3); ಭಾರತ: (ಪರಿಷ್ಕೃತ ಗುರಿ: 5.2 ಓವರುಗಳಲ್ಲಿ 29) 5.2 ಓವರುಗಳಲ್ಲಿ 1 ವಿಕೆಟ್ಗೆ 47(ಸ್ಮೃತಿ ಮಂಧಾನ ಔಟಾಗದೇ 5, ಡಿ.ಹೇಮಲತಾ ಔಟಾಗದೇ 41; ಮರೂಫಾ ಅಖ್ತರ್ 11ಕ್ಕೆ1). ಪಂದ್ಯದ ಆಟಗಾರ್ತಿ: ಡಿ.ಹೇಮಲತಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.