ಅಮೃತಸರ: ಖಲಿಸ್ತಾನ ಉಗ್ರರನ್ನು ಹುತ್ಮಾತರೆಂದು ಬಿಂಬಿಸಿ ಸ್ಮರಿಸಿ ಮಾಡಲಾಗಿದ್ದ ಪೋಸ್ಟ್ಗೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟಿಗ, ಆಫ್ ಸ್ಪಿನ್ನರ್ ಹರಭಜನ್ ಸಿಂಗ್, ಕ್ಷಮೆಯಾಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನನ್ನ ಜನರಿಗೆ ನನ್ನ ಅಂತರಾಳದಿಂದ ಕ್ಷಮೆಯಾಚನೆ ಮಾಡುತ್ತೇನೆ ಎಂದು ಬರೆದಿದ್ದಾರೆ.
‘ನಿನ್ನೆ ನನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಡಲಾಗಿದ್ದ ಪೋಸ್ಟ್ ಬಗ್ಗೆ ವಿವರಣೆ ಮತ್ತು ಕ್ಷಮೆಯಾಚಿಸಲು ಬಯಸುತ್ತೇನೆ. ವಾಟ್ಸ್ ಆ್ಯಪ್ನಲ್ಲಿ ಬಂದ ಸಂದೇಶವನ್ನು ಪರಿಶೀಲಿಸದೆ ಆತುರದಲ್ಲಿ ಹಾಗೆಯೇ ಪೋಸ್ಟ್ ಮಾಡಿದ್ದೆ. ಅದು ನನ್ನ ತಪ್ಪು. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ನಾನು ಭಾರತಕ್ಕಾಗಿ ಹೋರಾಡುವ ಮತ್ತು ಭಾರತದ ವಿರುದ್ಧವಾಗಿ ನಿಲ್ಲದ ಸಿಖ್. ನನ್ನ ದೇಶಕ್ಕೆ ನನ್ನ ಬೇಷರತ್ ಕ್ಷಮೆಯಾಚನೆ’ ಎಂದು ಹರಭಜನ್ ಸಿಂಗ್ ಹೇಳಿದ್ದಾರೆ.
ಏನಿದು ವಿವಾದ?: 'ಆಪರೇಷನ್ ಬ್ಲೂಸ್ಟಾರ್' 37ನೇ ವರ್ಷಾಚರಣೆಯ ಭಾಗವಾಗಿ ಹರಭಜನ್ ಸಿಂಗ್, ಖಲಿಸ್ತಾನ ಉಗ್ರರನ್ನು ಹುತಾತ್ಮರೆಂದು ಸ್ಮರಿಸಿ ಇನ್ಸ್ಟಾಗ್ರಾಮ್ನಲ್ಲಿ ಚಿತ್ರ ಸಮೇತ ಸ್ಟೇಟಸ್ ಸಹ ಹಾಕಿರುವುದು ವರದಿಯಾಗಿತ್ತು.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.