ದುಬೈ: ಏಷ್ಯಾ ಕಪ್ ಟಿ20 ಟೂರ್ನಿಯಿಂದ ಮ್ಯಾಚ್ ರೆಫ್ರಿ ಆ್ಯಂಡಿ ಪೈಕ್ರಾಫ್ಟ್ ಅವರನ್ನು ಕೈಬಿಡಬೇಕೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಎರಡನೇ ಬಾರಿ ಮಾಡಿದ ಆಗ್ರಹವನ್ನೂ ಐಸಿಸಿ ಬುಧವಾರ ತಿರಸ್ಕರಿಸಿದೆ.
ತಾನು ಆಡುವ ಎಲ್ಲ ಪಂದ್ಯಗಳಿಂದ ಪೈಕ್ರಾಫ್ಟ್ ಅವರನ್ನು ಕೈಬಿಡಬೇಕೆಂಬ ಆಗ್ರಹವನ್ನು ಮತ್ತೊಮ್ಮೆ ಮುಂದಿಟ್ಟು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಮಂಗಳವಾರ ಸಂಜೆ ಐಸಿಸಿಗೆ ಇ–ಮೇಲ್ ಕಳುಹಿಸಿತ್ತು. ಪಿಸಿಬಿ ಈ ಮೊದಲು ಮಾಡಿದ್ದ ಅಗ್ರಹವನ್ನು ಐಸಿಸಿ ಮಂಗಳವಾರ ತಿರಸ್ಕರಿಸಿತ್ತು.
ಪಾಕಿಸ್ತಾನ ವಿರುದ್ಧ ಭಾನುವಾರ ನಡೆದ ‘ಎ’ ಗುಂಪಿನ ಪಂದ್ಯದ ನಂತರ, ಸೂರ್ಯಕುಮಾರ್ ನೇತೃತ್ವದ ಭಾರತ ತಂಡದ ಆಟಗಾರರು ಎದುರಾಳಿ ತಂಡದ ಆಟಗಾರಿಗೆ ಹಸ್ತಲಾಘವ ಮಾಡದೇ ನೇರವಾಗಿ ಪೆವಿಲಿಯನ್ಗೆ ಮರಳಿದ್ದರು. ಇದಕ್ಕೆ ಪ್ರತಿಯಾಗಿ ಪಂದ್ಯದ ನಂತರ ನಡೆಯುವ ಪ್ರೆಸೆಂಟೇಷನ್ ಕಾರ್ಯಕ್ರಮವನ್ನು ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಆಘಾ ಬಹಿಷ್ಕರಿಸಿದ್ದರು.
‘ಈ ಎಲ್ಲ ಗೊಂದಲಗಳಿಗೆ ಪೈಕ್ರಾಫ್ಟ್ ಅವರೇ ಕಾರಣ. ಸೂರ್ಯಕುಮಾರ್ ಅವರ ಜೊತೆ ಹಸ್ತಲಾಘವ ಮಾಡದಂತೆ ಸಲ್ಮಾನ್ ಅವರಿಗೆ ರೆಫ್ರಿ ಆಗಿದ್ದ ಪೈಕ್ರಾಫ್ಟ್ ಸೂಚಿಸಿದ್ದರು. ಆಟಗಾರರ ಪಟ್ಟಿ (ಟೀಮ್ ಲಿಸ್ಟ್) ಪರಸ್ಪರ ವಿನಿಮಯ ಮಾಡದಂತೆ ಅವರು ತಡೆದಿದ್ದರು’ ಎಂಬುದು ಪಾಕಿಸ್ತಾನದ ದೂರು ಆಗಿದೆ.
ಟಾಸ್ ಹಾಕಿದ ನಂತರ ಕೈಕುಲುಕಿ, ಉಭಯ ನಾಯಕರು ಅಂತಿಮ 11 ಆಟಗಾರರ ಪಟ್ಟಿ ವಿನಿಯಮ ಮಾಡುವುದು ವಾಡಿಕೆ
ಪೈಕ್ರಾಪ್ಟ್ ವಜಾಕ್ಕೆ ಪಟ್ಟುಹಿಡಿದಿದ್ದ ಪಾಕಿಸ್ತಾನ ತಂಡವು ಟೂರ್ನಿಯಿಂದ ಹಿಂದೆಸರಿಯುವುದಾಗಿಯೂ ಬೆದರಿಕೆಹಾಕಿತ್ತು. ಟೂರ್ನಿಯಿಂದ ಹಿಂದೆಸರಿದಲ್ಲಿ ಆ ತಂಡವು ಸುಮಾರು 140 ಕೋಟಿ ಕಳೆದುಕೊಳ್ಳುತಿತ್ತು. ಪಾಕಿಸ್ತಾನ ತಂಡ, ಯುಇಇ ವಿರುದ್ಧ ಬುಧವಾರ ‘ಎ’ ಗುಂಪಿನ ಪಂದ್ಯ ಆಡಲು ಟೀಮ್ ಹೋಟೆಲ್ನಿಂದ ತಡವಾಗಿ ಹೊರಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.