ADVERTISEMENT

ಭುಜದ ಗಾಯ: ಏಪ್ರಿಲ್ 8ಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಶ್ರೇಯಸ್ ಅಯ್ಯರ್

ಪಿಟಿಐ
Published 2 ಏಪ್ರಿಲ್ 2021, 7:24 IST
Last Updated 2 ಏಪ್ರಿಲ್ 2021, 7:24 IST
ಶ್ರೇಯಸ್ ಅಯ್ಯರ್ –ಪ್ರಜಾವಾಣಿ ಚಿತ್ರ 
ಶ್ರೇಯಸ್ ಅಯ್ಯರ್ –ಪ್ರಜಾವಾಣಿ ಚಿತ್ರ    

ಮುಂಬೈ: ಭುಜದ ಗಾಯದಿಂದ ಬಳಲುತ್ತಿರುವ ಭಾರತದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್, ಇದೇ ಏಪ್ರಿಲ್ 8 ರಂದು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಕೊನೆಯ ಎರಡು ಏಕದಿನ ಪಂದ್ಯಗಳಿಂದ ಹೊರಗುಳಿದಿದ್ದ ಅವರು, ಐಪಿಎಲ್ ಸರಣಿಗೂ ಅಲಭ್ಯರಾಗಿದ್ದಾರೆ.

ಮಾರ್ಚ್ 23 ರಂದು ಪುಣೆಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ವೇಗಿ ಶಾರ್ದುಲ್ ಠಾಕೂರ್ ಬೌಲಿಂಗ್‌ನಲ್ಲಿ ಜಾನಿ ಬೈಸ್ಟೋ ಹೊಡೆದ ಚೆಂಡನ್ನು ತಡೆಯುವ ಯತ್ನದಲ್ಲಿ ಅಯ್ಯರ್, ಭುಜಕ್ಕೆ ಗಾಯಮಾಡಿಕೊಂಡಿದ್ದರು.

ತೀವ್ರವಾದ ನೋವಿನಿಂದಾಗಿ ಅವರು ಭುಜವನ್ನು ಹಿಡಿದುಕೊಂಡೇ ಮೈದಾನದಿಂದ ಹೊರ ನಡೆದಿದ್ದರು.

ADVERTISEMENT

‘ಭುಜದ ಗಾಯದಿಂದ ಬಳಲುತ್ತಿರುವ ಶ್ರೇಯಸ್, ಏಪ್ರಿಲ್ 8 ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ’ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

ಶ್ರೇಯಸ್ ಅಯ್ಯರ್ ಗಾಯದಿಂದ ಚೇತರಿಸಿಕೊಳ್ಳಲು ಕನಿಷ್ಠ ನಾಲ್ಕು ತಿಂಗಳ ಸಮಯ ಹಿಡಿಯುವ ಸಾಧ್ಯತೆ ಇದೆ.

ಈ ಕುರಿತಂತೆ ಕಳೆದ ವಾರ ಟ್ವೀಟ್ ಮಾಡಿದ್ದ ಅವರು, ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ ಎಂದು ಹೇಳಿದ್ದರು.

‘ನಾನು ನಿಮ್ಮ ಸಂದೇಶಗಳನ್ನು ಓದುತ್ತಿದ್ದೇನೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಆಭಾರಿಯಾಗಿದ್ದೇನೆ. ನಿಮ್ಮೆಲ್ಲರಿಗೂ ಹೃದಯದ ಅಂತರಾಳದಿಂದ ಧನ್ಯವಾದ ಹೇಳುತ್ತೇನೆ’ ಎಂದು ತಿಳಿಸಿದ್ದರು.

ಡೆಲ್ಲಿ ಕ್ಯಾಪಿಟಲ್ಸ್ ನಾಯಕರಾಗಿದ್ದ ಶ್ರೇಯಸ್ ಅಯ್ಯರ್ ಅವರು ಗಾಯಗೊಂಡಿರುವುದರಿಂದ ರಿಷಬ್ ಪಂತ್‌ಗೆ ನಾಯಕನ ಹೊಣೆ ನೀಡಲಾಗಿದೆ. ಏಪ್ರಿಲ್ 9ರಿಂದ ಐಪಿಎಲ್ ಸರಣಿ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.