ಸಿಡ್ನಿ: ಭಾರತದ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿಯಲ್ಲಿ ಗೆಲುವು ಪಡೆಯುವ ಮೂಲಕ ಭಾರತೀಯ ಕ್ರಿಕೆಟ್ ಪ್ರಿಯರಿಗೆ ಸಿಹಿಯ ಸೋಮವಾರದ ಅನುಭವ ನೀಡಿದೆ. 1947–48ರಿಂದ ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಳ್ಳುತ್ತಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಬಾರ್ಡರ್–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿಮೊದಲ ಇನಿಂಗ್ಸ್ನಲ್ಲಿ ಭಾರತದ 622 ರನ್ಗಳ ಉತ್ತರವಾಗಿ 300 ರನ್ಗಳಿಗೆ ಆಲೌಟ್ ಆದ ಆತಿಥೇಯ ತಂಡವು ಫಾಲೋ ಆನ್ ಪಡೆಯಿತು. ಇದರಿಂದಾಗಿ ಭಾನುವಾರ ಬೆಳಿಗ್ಗೆ ಎರಡನೇ ಇನಿಂಗ್ಸ್ ಆರಂಭಿಸಿತು. ವಿಕೆಟ್ ನಷ್ಟವಿಲ್ಲದೆ 6 ರನ್ಗಳಿಸಿದ್ದ ಆಸ್ಟ್ರೇಲಿಯಾ ಐದನೇ ದಿನದಾಟವನ್ನು ಪೂರ್ಣಗೊಳಿಸಲು ಜಡಿ ಮಳೆ ಅಡ್ಡಿಪಡಿಸಿತು. ಹವಾಮಾನ ಅನನುಕೂಲವಾಗಿದ್ದ ಕಾರಣ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಿದ್ದರಿಂದ ಡ್ರಾ ಎಂದು ಘೋಷಿಸಲಾಯಿತು. ಈ ಮೂಲಕ ಭಾರತ ಟೆಸ್ಟ್ ಸರಣಿಯಲ್ಲಿ 2–1ರಲ್ಲಿ ಗೆಲುವು ಪಡೆಯಿತು.
ಅಡಿಲೇಡ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಭಾರತ 31ರನ್ಗಳ ಗೆಲುವು ಪಡೆಯಿತು. ಮೆಲ್ಬೋರ್ನ್ನಲ್ಲಿ 137 ರನ್ಗಳಿಂದ ಜಯ ಪಡೆಯಿತು. ಆಸ್ಟ್ರೇಲಿಯಾ ಪರ್ತ್ನಲ್ಲಿನ ಎರಡನೇ ಟೆಸ್ಟ್ನಲ್ಲಿ 146 ರನ್ಗಳ ಜಯ ಸಾಧಿಸಿತ್ತು.
ಮೋಡ ಮತ್ತು ಮಳೆಯ ಕಾರಣದಿಂದ ಐದನೇ ದಿನದಾಟದ ಆರಂಭದ ಸಮಯ ಮುಂದೂಡಿತು. ಮೈದಾನದಲ್ಲಿ ಕ್ರಿಕೆಟ್ ಮುಂದುವರಿಸುವುದು ಅಸಾಧ್ಯವೆಂದು ಮನಗಾಣುತ್ತಿದ್ದಂತೆ ಆಸ್ಟ್ರೇಲಿಯಾ ಸಮಯ, ಮಧ್ಯಾಹ್ನ 2:30ಕ್ಕೆ ಪಂದ್ಯ ನಿಲ್ಲಿಸುವ ಕರೆ ನೀಡಲಾಯಿತು. ಭಾರತದ ರನ್ ಗಳಿಕೆ ಚುಕ್ತಾ ಮಾಡಲು ಆಸ್ಟ್ರೇಲಿಯಾ 316 ರನ್ ಗಳಿಸಬೇಕಿತ್ತು.
ಮೊದಲ ಎರಡು ದಿನ, ಚೇತೇಶ್ವರ ಪೂಜಾರ (193) ಮತ್ತು ರಿಷಭ್ ಪಂತ್(159*) ಹರಿಸಿದ ರನ್ ಹೊಳೆಯಿಂದಾಗಿ ಭಾರತವು ಮೊದಲ ಇನಿಂಗ್ಸ್ 622/7ಕ್ಕೆ ಡಿಕ್ಲೇರ್ ಮಾಡಿಕೊಂಡಿತು. ಮೂರನೇ ದಿನ 6 ವಿಕೆಟ್ ನಷ್ಟಕ್ಕೆ 236ರನ್ ಗಳಿಸಿದ್ದ ಆಸ್ಟ್ರೇಲಿಯಾ ನಾಲ್ಕನೇ ದಿನ ಕುಲದೀಪ್ ಯಾದವ್(5/99) ಬೌಲಿಂಗ್ ಮೋಡಿಯಲ್ಲಿ ಸಿಲುಕಿ 300 ರನ್ ಗಳಿಸುವಷ್ಟರಲ್ಲಿ ಎಲ್ಲ ವಿಕೆಟ್ ಕಳೆದುಕೊಂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.