ಕೋಲ್ಕತ್ತ: ಭಾರತದ ಕ್ರಿಕೆಟ್ ಇಂದು ಅಪಾಯದಂಚಿನಲ್ಲಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಜೊಹ್ರಿ ವಿರುದ್ಧ ಕೇಳಿಬಂದ ಲೈಂಗಿಕ ದೌರ್ಜನ್ಯ ಆರೋಪದ ಸೂಕ್ತ ತನಿಖೆ ಮಾಡುವಲ್ಲಿ ಆಡಳಿತ ವಿಫಲವಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸೌರವ್ ಗಂಗೂಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಗಂಗೂಲಿ ಅವರು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ. ಕಾರ್ಯದರ್ಶಿ ಅಮಿತಾಭ್ ಚೌಧರಿ ಮತ್ತು ಖಜಾಂಚಿ ಅನಿರುದ್ಧ ಚೌಧರಿ ಅವರಿಗೆ ಪತ್ರ ಬರೆದಿದ್ದಾರೆ.
‘ಆರೋಪದಲ್ಲಿ ಎಷ್ಟರಮಟ್ಟಿಗೆ ಸತ್ಯಾಸತ್ಯತೆ ಇದೆ ಎಂದು ನನಗೆ ಗೊತ್ತಿಲ್ಲ. ಆದರೆ ಇತ್ತೀಚೆಗೆ ಕೇಳಿಬಂದ ಇಂತಹ ಆರೋಪಗಳು ಬಿಸಿಸಿಐ ಹೆಸರಿಗೆ ಕಳಂಕ ತಂದಿವೆ. ಅಲ್ಲದೇ ದುರ್ಬಲ ಆಡಳಿತವನ್ನು ಎತ್ತಿತೋರಿಸಿವೆ. ಕ್ರಿಕೆಟ್ ಆಡಳಿತವು ಸಾಗುತ್ತಿರುವ ಹಾದಿಯನ್ನು ನೋಡಿ ನನಗೆ ನಿಜಕ್ಕೂ ಆತಂಕವಾಗಿದೆ. ಆದ್ದರಿಂದ ಈ ಪತ್ರವನ್ನು ಮೇಲ್ ಮಾಡುತ್ತಿದ್ದೇನೆ’ ಎಂದು ಗಂಗೂಲಿ ಉಲ್ಲೇಖಿಸಿದ್ದಾರೆ.
ಜೊಹ್ರಿ ಅವರ ವಿಚಾರಣೆಗಾಗಿ ಮೂವರು ಅಧಿಕಾರಿಗಳ ಸ್ವತಂತ್ರ ಸಮಿತಿಯನ್ನು ನೇಮಕ ಮಾಡಲಾಗಿದೆ. ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಜೊಹ್ರಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.