ಮೈಸೂರು: ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕ್ರಿಕೆಟ್ ಟೂರ್ನಿ ಮೈಸೂರಿನಲ್ಲಿ ನ.28 ರಿಂದ ಡಿ.10ರ ವರೆಗೆ ನಡೆಯಲಿದೆ.
ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಪುದುಚೇರಿಯ ಒಟ್ಟು 107 ವಿಶ್ವವಿದ್ಯಾಲಯಗಳ ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿವೆ. ಕರ್ನಾಟಕದ 31 ತಂಡಗಳು ಕಣದಲ್ಲಿವೆ. ಗಂಗೋತ್ರಿ ಗ್ಲೇಡ್ಸ್ ಒಳಗೊಂಡಂತೆ ಒಟ್ಟು ಏಳು ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ.
ಕಳೆದ ವರ್ಷ ದಕ್ಷಿಣ ವಲಯ ಅಂತರ ವಿ.ವಿ. ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಬೆಂಗಳೂರಿನ ಜೈನ್ ವಿ.ವಿ., ‘ರನ್ನರ್ ಅಪ್’ ಆಗಿದ್ದ ಮೈಸೂರು ವಿ.ವಿ., ಮೂರನೇ ಸ್ಥಾನ ಗಳಿಸಿದ್ದ ಚೆನ್ನೈನ ಹಿಂದೂಸ್ತಾನ್ ವಿ.ವಿ. ಮತ್ತು ನಾಲ್ಕನೇ ಸ್ಥಾನ ಪಡೆದಿದ್ದ ಹೈದರಾಬಾದ್ನ ಜವಾಹರಲಾಲ್ ನೆಹರು ತಾಂತ್ರಿಕ ವಿ.ವಿ ತಂಡಗಳು ಈ ಬಾರಿ ನೇರವಾಗಿ ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆದುಕೊಂಡಿವೆ. ಇನ್ನುಳಿದ ತಂಡಗಳು ನಾಕೌಟ್ ಹಂತದಲ್ಲಿ ಆಡಲಿವೆ. ದಕ್ಷಿಣ ವಲಯ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸುವ ತಂಡಗಳು ಅಖಿಲ ಭಾರತ ಅಂತರ ವಿ.ವಿ ಟೂರ್ನಿಯಲ್ಲಿ ಆಡಲು ಅರ್ಹತೆ ಪಡೆದುಕೊಳ್ಳಲಿವೆ.
ಫೈನಲ್ ಪಂದ್ಯ ಡಿ.10 ರಂದು ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಬುಧವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಮೈಸೂರು ವಿ.ವಿ. ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅವರು ಟೂರ್ನಿಯನ್ನು ಉದ್ಘಾಟಿಸಿದರು. ಕೆಎಸ್ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.