ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಭಾನುವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಆಡುವ ಸಾಧ್ಯತೆಯಿದೆ ಎಂದು ಮುಂಬೈ ಇಂಡಿಯನ್ಸ್ ಕ್ರಿಕೆಟ್ ಕಾರ್ಯಾಚರಣೆನಿರ್ದೇಶಕ ಜಹೀರ್ ಖಾನ್ ಸುಳಿವು ನೀಡಿದ್ದಾರೆ.
ಫಿಟ್ನೆಸ್ ಸಮಸ್ಯೆಯಿಂದಾಗಿ ಹಾರ್ದಿಕ್ ಪಾಂಡ್ಯ ಮೊದಲೆರೆಡು ಪಂದ್ಯಗಳಲ್ಲಿ ಆಡಿರಲಿಲ್ಲ. ಇದು ವ್ಯಾಪಕ ಟೀಕೆಗೂ ಗ್ರಾಸವಾಗಿತ್ತು.
ಸಂಪೂರ್ಣ ದೈಹಿಕ ಸಾಮರ್ಥ್ಯ ಇಲ್ಲದ ಆಟಗಾರನನ್ನು ಟ್ವೆಂಟಿ-20 ವಿಶ್ವಕಪ್ಗಾಗಿ ಭಾರತ ತಂಡಕ್ಕೆ ಆರಿಸಿದ್ದು ಏಕೆ ಎಂದು ಭಾರತದ ಮಾಜಿ ಕ್ರಿಕೆಟಿಗರೊಬ್ಬರು ಟೀಕೆ ಮಾಡಿದ್ದರು.
ಈಗ ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಬಗ್ಗೆ ಜಹೀರ್ ಖಾನ್ ಮಾಹಿತಿ ನೀಡಿದ್ದಾರೆ. ಚೆನ್ನೈ ಹಾಗೂ ಕೆಕೆಆರ್ ವಿರುದ್ಧದ ಪಂದ್ಯಗಳಿಗೆ ಹಾರ್ದಿಕ್ ಅಲಭ್ಯರಾಗಿದ್ದರು. ಆದರೆ ಬೆಂಗಳೂರು ವಿರುದ್ಧ ಆಡಲು ಸಿದ್ಧರಾಗಿದ್ದಾರೆ ಎಂದು ಜಹೀರ್ ತಿಳಿಸಿದ್ದಾರೆ.
ಮುಂಬೈ ಪಾಲಿಗೆ ತಂಡದ ಸಮತೋಲನ ಕಾಪಾಡಿಕೊಳ್ಳುವುದು ಅತಿ ಮುಖ್ಯವೆನಿಸಿದೆ. ಸತತ ಎರಡು ಸೋಲಿನಿಂದಾಗಿ ಕಂಗೆಟ್ಟಿರುವ ಮುಂಬೈಗೆ ಹಾರ್ದಿಕ್ ಆಗಮನದೊಂದಿಗೆ ಬಲವೃದ್ಧಿಸಿಕೊಳ್ಳಲಿದೆ.
ಹಾರ್ದಿಕ್ ಪಾಂಡ್ಯ ತರಬೇತಿಯಲ್ಲಿ ಭಾಗವಹಿಸಿದ್ದಾರೆ. ಅವರು ತಂಡದ ಅಮೂಲ್ಯ ಆಟಗಾರ. ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಮಹತ್ತರ ಕೊಡುಗೆಯನ್ನು ನೀಡಬಲ್ಲರು ಎಂದು ಜಹೀರ್ ವಿವರಿಸಿದ್ದಾರೆ.
ಮುಂಬರುವ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಮರಳಿ ಪಡೆಯುವುದು ಅತಿ ಮಹತ್ವದೆನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.