ಕೋಲ್ಕತ್ತ: ಅನುಭವಿ ಬೌಲರ್ ರೋನಿತ್ ಮೋರೆ ಹಾಗೂ ವಾಸುಕಿ ಕೌಶಿಕ್ ಅವರ ಉತ್ತಮ ಬೌಲಿಂಗ್ ಬಲದಿಂದ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ರಾಜಸ್ಥಾನ ವಿರುದ್ಧ ಜಯಿಸಿತು. ಇದರೊಂದಿಗೆ ಪ್ರೀಕ್ವಾರ್ಟರ್ಫೈನಲ್ ಪ್ರವೇಶ ಖಚಿತಪಡಿಸಿಕೊಂಡಿತು.
ಬುಧವಾರ ಕಲ್ಕತ್ತಾ ಕ್ರಿಕೆಟ್ ಮತ್ತು ಫುಟ್ಬಾಲ್ ಮೈದಾನದಲ್ಲಿ ನಡೆದ ಬಿ ಗುಂಪಿನ ಕೊನೆಯ ಪಂದ್ಯದಲ್ಲಿ ಮಯಂಕ್ ಅಗರವಾಲ್ ಬಳಗವು 60 ರನ್ಗಳಿಂದ ಜಯಿಸಿತು.
ಟಾಸ್ ಗೆದ್ದ ರಾಜಸ್ಥಾನ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕರ್ನಾಟಕ ತಂಡವು 50 ಓವರ್ಗಳಲ್ಲಿ 208 ರನ್ಗಳ ಸಾಧಾರಣ ಮೊತ್ತ ಗಳಿಸಿ ಆಲೌಟ್ ಆಯಿತು. ನಿಕಿನ್ ಜೋಸ್ (67; 81ಎ, 4X10) ಹಾಗೂ ಶ್ರೇಯಸ್ ಗೋಪಾಲ್ (57; 72ಎ, 4X6) ಅರ್ಧಶತಕಗಳನ್ನು ಗಳಿಸಿದ್ದರಿಂದ ಈ ಮೊತ್ತ ಗಳಿಕೆ ಸಾಧ್ಯವಾಯಿತು. ಆರಂಭಿಕ ಬ್ಯಾಟರ್ಗಳು ವೈಫಲ್ಯ ಅನುಭವಿಸಿದರು.
ರಾಜಸ್ಥಾನದ ಅನಿಕೇತ್ ಚೌಧರಿ ಹಾಊ ಸಾಹಿಲ್ ದಿವಾನ್ ಅವರು ತಲಾ ಮೂರು ವಿಕೆಟ್ ಗಳಿಸಿ ಕರ್ನಾಟಕದ ಬ್ಯಾಟಿಂಗ್ ಪಡೆಯನ್ನು ಕಾಡಿದರು. ಆದರೆ, ನವಪ್ರತಿಭೆ ನಿಕಿನ್ ಜೋಸ್ ಹಾಗೂ ಶ್ರೇಯಸ್ ತಂಡವು ಅಲ್ಪಮೊತ್ತಕ್ಕೆ ಕುಸಿಯುವುದನ್ನು ತಡೆದರು.
ಸಾಧಾರಣ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡವನ್ನು ಗೆಲುವಿನತ್ತ ಮುನ್ನಡೆಸಲು ಆರಂಭಿಕ ಬ್ಯಾಟರ್ ಯಶ್ ಕೊಠಾರಿ (49; 81ಎ) ಪ್ರಯತ್ನಿಸಿದರು. ಆದರೆ ಮತ್ತೊಂದು ಬದಿಯಿಂದ ಉಳಿದ ಬ್ಯಾಟರ್ಗಳು ಅವರಿಗೆ ಜೊತೆ ನೀಡಲು ಕರ್ನಾಟಕದ ಬೌಲರ್ಗಳು ಬಿಡಲಿಲ್ಲ.
ಕೌಶಿಕ್ ಮತ್ತು ರೋನಿತ್ ಅವರ ದಾಳಿ ಪರಿಣಾಮಕಾರಿಯಾಗಿತ್ತು. ಕೆಳಕ್ರಮಾಂಕದ ಬ್ಯಾಟರ್ಗಳನ್ನು ಪೆವಿಲಿಯನ್ಗೆ ಮರಳಿಸುವಲ್ಲಿ ಸ್ಪಿನ್ನರ್ ಗೌತಮ್ ಯಶಸ್ವಿಯಾದರು.
ಕರ್ನಾಟಕ ತಂಡವು ಒಟ್ಟು 24 ಪಾಯಿಂಟ್ ಗಳಿಸಿದೆ. ಇದೇ 26ರಂದು ಅಹಮದಾಬಾದಿನಲ್ಲಿ ನಡೆಯುವ ಪ್ರೀಕ್ವಾರ್ಟರ್ನಲ್ಲಿ ಜಾರ್ಖಂಡ್ ತಂಡವನ್ನು ಎದುರಿಸಲಿದೆ.
ಸಂಕ್ಷಿಪ್ತ ಸ್ಕೋರು: ಕರ್ನಾಟಕ: 48.4 ಓವರ್ಗಳಲ್ಲಿ 208 (ನಿಕಿನ್ ಜೋಸ್ 67, ಮನೀಷ್ ಪಾಂಡೆ 21, ಶ್ರೇಯಸ್ ಗೋಪಾಲ್ 57, ಬಿ.ಆರ್. ಶರತ್ 24, ಅನಿಕೇತ್ ಚೌಧರಿ 28ಕ್ಕೆ3, ಸಾಹಿಲ್ ದಿವಾನ್ 30ಕ್ಕೆ3, ಶುಭಂ ಶರ್ಮಾ 39ಕ್ಕೆ2) ರಾಜಸ್ಥಾನ: 41.1 ಓವರ್ಗಳಲ್ಲಿ 148 (ಯಶ್ ಕೊಠಾರಿ 49, ಕುನಾಲ್ ಸಿಂಗ್ ರಾಥೋಡ್ 35, ವಿದ್ವತ್ ಕಾವೇರಪ್ಪ 17ಕ್ಕೆ2, ವಿ. ಕೌಶಿಕ್ 23ಕ್ಕೆ2, ರೋನಿತ್ ಮೋರೆ 35ಕ್ಕೆ3, ಕೆ. ಗೌತಮ್ 36ಕ್ಕೆ3) ಫಲಿತಾಂಶ: ಕರ್ನಾಟಕ ತಂಡಕ್ಕೆ 60 ರನ್ಗಳ ಗೆಲುವು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.