ADVERTISEMENT

ಭಾರತದ ವಿರುದ್ಧ ಹೊಸ ತಂತ್ರ: ಫಾಫ್‌

ಬಾಂಗ್ಲಾದೇಶ ಎದುರು ಸೋತ ದಕ್ಷಿಣ ಆಫ್ರಿಕಾ ತಂಡ

ಏಜೆನ್ಸೀಸ್
Published 3 ಜೂನ್ 2019, 18:44 IST
Last Updated 3 ಜೂನ್ 2019, 18:44 IST
ಫಾಪ್ ಡು ಪ್ಲೆಸಿ -ಎಎಫ್‌ಪಿ ಚಿತ್ರ
ಫಾಪ್ ಡು ಪ್ಲೆಸಿ -ಎಎಫ್‌ಪಿ ಚಿತ್ರ   

ಲಂಡನ್‌ (ಪಿಟಿಐ): ಸತತ ಸೋಲಿನಿಂದ ಕಂಗೆಟ್ಟಿರುವ ದಕ್ಷಿಣ ಆಫ್ರಿಕಾ ತಂಡ ಭಾರತದ ವಿರುದ್ಧ ಬುಧವಾರ ನಡೆಯಲಿರುವ ಪಂದ್ಯದಲ್ಲಿ ನವೀನ ತಂತ್ರಗಳನ್ನು ಬಳಸಿ ಗೆಲುವಿನ ಲಯಕ್ಕೆ ಮರಳಲಿದೆ ಎಂದು ನಾಯಕ ಫಾಪ್ ಡು ಪ್ಲೆಸಿ ಹೇಳಿದರು.

ಭಾನುವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಬಾಂಗ್ಲಾದೇಶ ವಿರುದ್ಧ 21 ರನ್‌ಗಳಿಂದ ಗೆದ್ದಿತ್ತು. ಟೂರ್ನಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ಗೂ ಮಣಿದಿತ್ತು. ತಂಡದ ಅನುಭವಿ ವೇಗಿ ಡೇಲ್ ಸ್ಟೇಯ್ನ್‌ ಭುಜದ ನೋವಿನಿಂದ ಬಳಲುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಬಾಂಗ್ಲಾ ಎದುರಿನ ಪಂದ್ಯದಲ್ಲಿ ವೇಗಿ ಲುಂಗಿ ಗಿಡಿ ಗಾಯಗೊಂಡಿದ್ದು ಭಾರತ ಎದುರಿನ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.

‘ಆರಂಭದ ಎರಡು ಪಂದ್ಯದಲ್ಲಿ ಸೋತಿದ್ದೇವೆ. ಈಗ ತಂಡದ ಉತ್ಸಾಹವನ್ನು ಹೆಚ್ಚಿಸುವ ಕಾರ್ಯ ಆಗಬೇಕಿದೆ. ಸದ್ಯ ಭಾರತ ಬಲಿಷ್ಠವಾಗಿದ್ದು ಆ ತಂಡವನ್ನು ಎದುರಿಸುವುದು ಎಲ್ಲರಿಗೂ ಸವಾಲೇ ಸರಿ. ಆದರೂ ಎದೆಗುಂದದೆ ಕಣಕ್ಕೆ ಇಳಿಯಲಿದ್ದೇವೆ’ ಎಂದು ಫಾಫ್ ಡು ಪ್ಲೆಸಿ ತಿಳಿಸಿದರು.

ADVERTISEMENT

‘ಬಾಂಗ್ಲಾ ಎದುರಿನ ಸೋಲು ನಿರಾಸೆ ಉಂಟು ಮಾಡಿದೆ. ಆಟದ ಎಲ್ಲ ವಿಭಾಗಗಳಲ್ಲೂ ತಂಡ ವೈಫಲ್ಯ ಕಂಡಿತ್ತು. ಅದೃಷ್ಟವನ್ನು ಹಳಿಯುತ್ತ ಕುಳಿತುಕೊಳ್ಳುವುದು ಸರಿಯಲ್ಲ. ಮುಂದಿನ ಪಂದ್ಯಗಳಲ್ಲಿ ಪುಟಿದೇಳಲೇಬೇಕು’ ಎಂದು ಅವರು ನುಡಿದರು.

‘ದಕ್ಷಿಣ ಆಫ್ರಿಕಾದಂತಹ ಬಲಿಷ್ಠ ತಂಡವನ್ನು ಮಣಿಸುವುದು ಸುಲಭದ ಮಾತಲ್ಲ. ಆದ್ದರಿಂದ ಈ ಜಯ ತಂಡದ ಭರವಸೆಯನ್ನು ಇಮ್ಮಡಿಗೊಳಿಸಿದೆ’ ಎಂದು ಬಾಂಗ್ಲಾದೇಶದ ನಾಯಕ ಮಶ್ರಫೆ ಮೊರ್ಜಜಾ ಪಂದ್ಯದ ನಂತರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.