ನವದೆಹಲಿ: ‘ನನ್ನ ಹೆಸರಿಗೆ ಮಸಿ ಬಳಿಯಬೇಕೆಂಬ ಉದ್ದೇಶದಿಂದ ವ್ಯಕ್ತಿಯೊಬ್ಬರು ನನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದಕ್ಕೆ ಸ್ಥಳೀಯ ರಾಜಕಾರಣಿಗಳ ಕುಮ್ಮಕ್ಕು ಇದೆ’ ಎಂದು ಹಿರಿಯ ಕ್ರಿಕೆಟಿಗ ಪ್ರವೀಣ್ ಕುಮಾರ್ ಆರೋಪಿಸಿದ್ದಾರೆ.
ಮೀರತ್ನ ಮುಲ್ತಾನನಗರದಲ್ಲಿ ಪ್ರವೀಣ್ ನೆಲೆಸಿದ್ದಾರೆ. ಅವರ ನೆರೆಮನೆಯವರಾದ ಉದ್ಯಮಿ ದೀಪಕ್ ಶರ್ಮಾ ಭಾನುವಾರ ದೂರು ನೀಡಿದ್ದರು. ಶನಿವಾರ ಮಧ್ಯಾಹ್ನ ಶಾಲಾ ಬಸ್ನಿಂದ ಮಗನನ್ನು ಇಳಿಸಿಕೊಂಡು ಬರುವ ವೇಳೆ ಕಾರಿನಲ್ಲಿ ಬಂದ ಪ್ರವೀಣ್, ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಮಗನನ್ನೂ ತಳ್ಳಾಡಿ ಗಾಯಗೊಳಿಸಿದ್ದಾಗಿ ಶರ್ಮಾ ದೂರಿನಲ್ಲಿ ವಿವರಿಸಿದ್ದರು.
‘ಕೆಲ ವ್ಯಕ್ತಿಗಳಿಗೆ ನನ್ನ ಏಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ತೇಜೋವಧೆ ಮಾಡಲು ಮುಂದಾಗಿದ್ದಾರೆ. ನನ್ನ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಪ್ರಚಾರ ಪಡೆಯುತ್ತಿದ್ದಾರೆ’ ಎಂದು ಪ್ರವೀಣ್ ತಿಳಿಸಿದ್ದಾರೆ.
‘ಕುಟುಂಬದೊಂದಿಗೆ ಖುಷಿಯಿಂದ ಕಾಲ ಕಳೆಯುತ್ತಿದ್ದೇನೆ. ಇತ್ತೀಚೆಗೆ ಮುಗಿದ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ವೀಕ್ಷಕ ವಿವರಣೆಗಾರನಾಗಿ ಕೆಲಸ ಮಾಡಿದ್ದೆ. ಈಗ ರಣಜಿ ಟ್ರೋಫಿಯಲ್ಲೂ ವೀಕ್ಷಕ ವಿವರಣೆ ನೀಡುತ್ತಿದ್ದೇನೆ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.