ADVERTISEMENT

ಗಂಗೂಲಿಗೆ ಪತ್ರ ಬರೆದ ಡಬ್ಲ್ಯು.ವಿ. ರಾಮನ್

ಏಕವ್ಯಕ್ತಿ ಪ್ರಾಧಾನ್ಯತೆ ಸಂಸ್ಕೃತಿ ನಿಲ್ಲಬೇಕೆಂದ ಹಿರಿಯ ಕೋಚ್

​ಪ್ರಜಾವಾಣಿ ವಾರ್ತೆ
Published 14 ಮೇ 2021, 15:19 IST
Last Updated 14 ಮೇ 2021, 15:19 IST
ಡಬ್ಲ್ಯು.ವಿ. ರಾಮನ್
ಡಬ್ಲ್ಯು.ವಿ. ರಾಮನ್   

ನವದೆಹಲಿ:ಕ್ರಿಕೆಟ್ ತಂಡದಲ್ಲಿ ತಾರಾ ವರ್ಚಸ್ಸಿನ ಆಟಗಾರರಿಗೆ ವಿಶೇಷ ಆದ್ಯತೆ ಕೊಡುವ ಧೋರಣೆಯು ಸರಿಯಲ್ಲ. ಎಲ್ಲರನ್ನೂ ಒಂದೇ ತರಹ ನೋಡಬೇಕು ಎಂದು ಭಾರತ ಮಹಿಳಾ ತಂಡದ ಮಾಜಿ ಕೋಚ್ ಡಬ್ಲ್ಯು.ವಿ. ರಾಮನ್ ಅಭಿಪ್ರಾಯಪಟ್ಟಿದ್ಧಾರೆ.

ಶುಕ್ರವಾರ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರಿಗೆ ಬರೆದ ಪತ್ರದಲ್ಲಿ ಈ ಮಾತನ್ನು ಉಲ್ಲೇಖಿಸಿದ್ದಾರೆ.

ಮಹಿಳಾ ತಂಡಕ್ಕೆ ಗುರುವಾರ ನಡೆದಿದ್ದ ಕೋಚ್ ನೇಮಕ ಸಂದರ್ಶನದಲ್ಲಿ ರಾಮನ್ ಅವರಿಗೆ ಮತ್ತೊಂದು ಅವಕಾಶ ನೀಡಿರಲಿಲ್ಲ. ರಮೇಶ್ ಪೊವಾರ್ ಅವರನ್ನು ಕೋಚ್ ಆಗಿ ನೇಮಕ ಮಾಡಲಾಗಿತ್ತು. ಇದರಿಂದಾಗಿ ರಾಮನ್ ತೀವ್ರ ಬೇಸರಗೊಂಡಿದ್ದಾರೆಂದು ಅವರ ಆಪ್ತರು ತಿಳಿಸಿದ್ದಾರೆ.

ADVERTISEMENT

‘ತಂಡವಾಗಿ ಆಡುವುದಕ್ಕೆ ರಾಮನ್ ಪ್ರಾಮುಖ್ಯತೆ ಕೊಡುತ್ತಿದ್ದರು. ಯಾವುದೇ ಒಬ್ಬ ಆಟಗಾರ್ತಿಗಷ್ಟೇ ಪ್ರಾಮುಖ್ಯತೆ ಕೊಡುವ ಗುಣ ಅವರದ್ದಾಗಿರಲಿಲ್ಲ. ಇಡೀ ತಂಡವು ಒಬ್ಬ ಮಹಿಳೆಯ ಆಟದ ಮೇಲೆ ಅವಲಂಬಿತವಾಗಿರಬಾರದು ಎಂಬ ಯೋಚನೆ ಅವರದ್ದಾಗಿತ್ತೆಂಬುದನ್ನು ಪತ್ರದಲ್ಲಿ ರಾಮನ್ ಉಲ್ಲೇಖಿಸಿದ್ದಾರೆ‘ ಎಂದೂ ಅವರೂ ತಿಳಿಸಿದ್ದಾರೆ.

‘ತಮ್ಮ ಕಾರ್ಯವೈಖರಿಯ ಬಗ್ಗೆ ಯಾವುದೇ ಆಕ್ಷೇಪ ಅಥವಾ ಆರೋಪಗಳಿದ್ದರೂ ಬಿಸಿಸಿಐ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರೊಂದಿಗೆ ಮಾತನಾಡಲು ಸಿದ್ಧವಿರುದಾಗಿ ರಾಮನ್ ತಿಳಿಸಿದ್ದಾರೆ. ಒಂದೊಮ್ಮೆ ಭಾರತದಲ್ಲಿ ಕೋಚಿಂಗ್ ಮಾದರಿಯ ಕುರಿತು ಮಾರ್ಗದರ್ಶಿ ಸೂತ್ರಗಳನ್ನು ಮಾಡುವುದಾದರೆ ಅದು ಎನ್‌ಸಿಎನಲ್ಲಿ ಆಗುವುದು ಸೂಕ್ತ. ಏಕೆಂದರೆ, ಅದಕ್ಕೆ ಅತ್ಯಂತ ಸೂಕ್ತ ವ್ಯಕ್ತಿ ರಾಹುಲ್ ದ್ರಾವಿಡ್‘ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ‘ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.