ಅಹಮದಾಬಾದ್: ಸ್ಫೋಟಕ ಶೈಲಿಯ ಬ್ಯಾಟ್ಸ್ಮನ್ಗಳಾದ ಕ್ರಿಸ್ ಗೇಲ್ ಮತ್ತು ಡೇವಿಡ್ ಮಲಾನ್ ಅವರಿಗೆ ಇನಿಂಗ್ಸ್ ಆರಂಭಿಸುವ ಜವಾಬ್ದಾರಿ ನೀಡುವ ಬಗ್ಗೆ ತಂಡದಲ್ಲಿ ಚರ್ಚೆಯೇ ನಡೆಯಲಿಲ್ಲ ಎಂದು ಪಂಜಾಬ್ ಕಿಂಗ್ಸ್ ತಂಡದ ಹಂಗಾಮಿ ನಾಯಕ ಮಯಂಕ್ ಅಗರವಾಲ್ ತಿಳಿಸಿದ್ದಾರೆ.
ಅಪೆಂಡಿಸೈಟಿಸ್ಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿರುವ ನಾಯಕ ಕೆ.ಎಲ್.ರಾಹುಲ್ ಶೀಘ್ರದಲ್ಲೇ ತಂಡ ಸೇರಿಕೊಳ್ಳುವುದಾಗಿ ಕಿಂಗ್ಸ್ ಭರವಸೆ ವ್ಯಕ್ತಪಡಿಸಿದೆ. ಆದರೆ ತಂಡ ನಿರೀಕ್ಷಿಸಿದಷ್ಟು ಬೇಗ ಅವರು ಆಸ್ಪತ್ರೆಯಿಂದ ಬರುವ ಸಾಧ್ಯತೆ ಇಲ್ಲ. ಗುಣಮುಖರಾದ ನಂತರ ಕ್ವಾರಂಟೈನ್ನಲ್ಲಿ ಇರಬೇಕಾಗುತ್ತದೆ. ಹೀಗಾಗಿ ರಾಹುಲ್ ಟೂರ್ನಿಯಲ್ಲಿ ಇನ್ನುಳಿದಿರುವ ಪಂದ್ಯಗಳಿಂದ ಹೊರಗೆ ಉಳಿಯುವ ಸಾಧ್ಯತೆಯೇ ಹೆಚ್ಚು ಇದೆ.
‘ರಾಹುಲ್ ಬದಲಿಗೆ ಗೇಲ್ ಅಥವಾ ಮಲಾನ್ ಅವರನ್ನು ಆರಂಭಿಕ ಬ್ಯಾಟ್ಸ್ಮನ್ ಆಗಿ ಕಣಕ್ಕೆ ಇಳಿಸುವ ಯೋಜನೆ ಇಲ್ಲ. ಸದ್ಯ ತಂಡ ಉತ್ತಮ ರನ್ ಗಳಿಸುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ಎದುರು ಇನ್ನೂ 10 ಹೆಚ್ಚುವರಿ ರನ್ ಗಳಿಸಿದ್ದರೆ ಗೆಲುವು ಸಾಧಿಸಬಹುದಿತ್ತು’ ಎಂದು ಭಾನುವಾರದ ಪಂದ್ಯದ ನಂತರ ಅಗರವಾಲ್ ಹೇಳಿದರು.
ಪ್ರಭ್ ಸಿಮ್ರನ್ ಸಿಂಗ್ ಜೊತೆ ಇನಿಂಗ್ಸ್ ಆರಂಭಿಸಿದ ಅಗರವಾಲ್ ಈ ಪಂದ್ಯದಲ್ಲಿ ಅಜೇಯ 99 ರನ್ ಗಳಿಸಿದ್ದರು. ಪ್ರಭ್ ಸಿಮ್ರನ್ 15 ರನ್ ಗಳಿಸಿದ್ದರು. 13 ರನ್ ಗಳಿಸಿದ್ದ ಗೇಲ್ ಮತ್ತು 26 ರನ್ ಗಳಿಸಿದ್ದ ಮಲಾನ್ ಕ್ರಮವಾಗಿ ಮೂರು ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.