ನವದೆಹಲಿ: ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಾಹುಲ್ ಜೊಹ್ರಿ ಅವರು ದೋಷಮುಕ್ತರಾಗಿದ್ದಾರೆ.
ಬುಧವಾರ ಈ ಪ್ರಕರಣದ ವಿಚಾರಣೆ ನಡೆಸಿದ ಮೂರು ಸದಸ್ಯರ ಸಮಿತಿಯು ತೀರ್ಪು ಪ್ರಕಟಿಸಿತು. ‘ಆರೋಪವು ಸತ್ಯಕ್ಕೆ ದೂರವಾಗಿದೆ’ ಎಂದು ಸಮಿತಿ ಹೇಳಿದೆ.
ಸಮಿತಿಯಲ್ಲಿ ನಿವೃತ್ತ ನ್ಯಾಯಮೂರ್ತಿ ರಾಕೇಶ್ ಶರ್ಮಾ, ದೆಹಲಿ ಮಹಿಳಾ ಆಯೋಗದ ಮಾಜಿ ಮುಖ್ಯಸ್ಥ ಬರ್ಕಾ ಸಿಂಗ್ ಮತ್ತು ವಕೀಲೆ ವೀಣಾಗೌಡ ಸಮಿತಿಯಲ್ಲಿದ್ದರು.
‘ಜೊಹ್ರಿಯವರ ಆರೋಪ ಸಾಬೀತಾಗಿಲ್ಲ. ಆದರೆ ಅವರಿಗೆ ಲಿಂಗ ಸೂಕ್ಷ್ಮತೆ ಮತ್ತು ನಡವಳಿಕೆ ಕುರಿತ ಆಪ್ತ ಸಮಾಲೋಚನೆ ಹಾಗೂ ಮಾರ್ಗದರ್ಶನದ ಅಗತ್ಯವಿದೆ’ ಎಂದು ವೀಣಾಗೌಡ ಅಭಿಪ್ರಾಯಪಟ್ಟಿದ್ದಾರೆ.
‘ಕಳೆದ ಆರು ವಾರಗಳಲ್ಲಿ ನಾನು ಬಹಳಷ್ಟು ಮಾನಸಿಕ ಯಾತನೆ ಆನುಭವಿಸಿದೆ. ಇದೀಗ ನಿರಾಳವಾಗಿದೆ’ ಜೊಹ್ರಿ ಪ್ರತಿಕ್ರಿಯಿಸಿದ್ದಾರೆ.
ಪಟ್ಟು ಸಡಿಲಿಸದ ಎಡುಲ್ಜಿ: ಆರೋಪ ಕೇಳಿಬಂದಾಗಿನಿಂದಲೂ ಜೊಹ್ರಿ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದಿದ್ದ ಸಿಒಎ ಸದಸ್ಯೆ ಡಯಾನಾ ಎಡುಲ್ಜಿ ಅವರು ಈಗಲೂ ತಮ್ಮ ನಿಲುವಿನಿಂದ ಹಿಂದೆ ಸರಿದಿಲ್ಲ.
‘ಜೊಹ್ರಿಯವರಿಗೆ ಆಪ್ತ ಸಮಾಲೋಚನೆ ಅಗತ್ಯವಿದೆ ಎಂದು ವೀಣಾಗೌಡ ಹೇಳಿದ್ದಾರೆ. ಇದರಿಂದ ಜೊಹ್ರಿಯವರು ಬಿಸಿಸಿಐನ ಸಿಇಒ ಆಗಿ ಮುಂದುವರಿಯಲು ಅನರ್ಹರಾಗಿದ್ದಾರೆ. ಅವರನ್ನು ಪದಚ್ಯುತಗೊಳಿಸಬೇಕು’ ಎಂದು ಎಡುಲ್ಜಿ ಪ್ರತಿಪಾದಿಸಿದ್ದಾರೆ.
‘ರಾಹುಲ್ ಜೊಹ್ರಿಯವರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ’ ಎಂದು ಮಹಿಳೆಯೊಬ್ಬರು ಹೋದ ತಿಂಗಳು ಟ್ವಿಟರ್ನಲ್ಲಿ ದೂರಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಸಿಸಿಐ–ಸಿಒಎ ವಿಚಾರಣೆಗೆ ಸಮಿತಿ ರಚಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.