ಬೆಂಗಳೂರು: ರಾಜ್ಯದ ಹುಬ್ಬಳ್ಳಿ, ಮೈಸೂರು ಮತ್ತು ಶಿವಮೊಗ್ಗದ ಕ್ರಿಕೆಟ್ಪ್ರೇಮಿಗಳಿಗೆ ಈ ಬಾರಿಯ ರಣಜಿ ಋತುವಿನ ಪಂದ್ಯಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಲಭಿಸಲಿದೆ.
ಡಿಸೆಂಬರ್ನಲ್ಲಿ ಆರಂಭವಾಗಲಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಬಿ ಗುಂಪಿನ ನಾಲ್ಕು ಪಂದ್ಯಗಳಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಆತಿಥ್ಯ ವಹಿಸಲಿದೆ.
ಡಿಸೆಂಬರ್ 17ರಿಂದ20ರವರೆಗೆ ಹುಬ್ಬಳ್ಳಿಯಲ್ಲಿ ಉತ್ತರಪ್ರದೇಶ ವಿರುದ್ಧ; 25 ರಿಂದ 28ರಂದು ಮೈಸೂರಿನಲ್ಲಿ ಹಿಮಾಚಲ ಪ್ರದೇಶ ಮತ್ತು ಫೆಬ್ರುವರಿ 4 ರಿಂದ 7ರವರೆಗೆ ಮಧ್ಯಪ್ರದೇಶದ ವಿರುದ್ಧ ಶಿವಮೊಗ್ಗದಲ್ಲಿ ಪಂದ್ಯಗಳು ನಡೆಯಲಿವೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೆಬ್ರುವರಿ 12ರಿಂದ 15ರವರೆಗೆ ನಡೆಯುವ ಪಂದ್ಯದಲ್ಲಿ ಕರ್ನಾಟಕವು ಬರೋಡಾ ಎದುರು ಆಡಲಿದೆ.
ಟೂರ್ನಿಯ ಮೊದಲ ಪಂದ್ಯವು ಡಿಸೆಂಬರ್ 9ರಂದು ಆರಂಭವಾಗಲಿದೆ. ಕರ್ನಾಟಕವು ದಿಂಡಿಗಲ್ನಲ್ಲಿ ತಮಿಳುನಾಡು ವಿರುದ್ಧ ಅಭಿಯಾನ ಆರಂಭಿಸಲಿದೆ.
ಹೋದ ವರ್ಷದ ಟೂರ್ನಿಯಲ್ಲಿ ಕರ್ನಾಟಕವು ಎ ಗುಂಪಿನಲ್ಲಿ ಆಡಿತ್ತು. ಬೆಂಗಳೂರಿನಲ್ಲಿ ನಡೆದಿದ್ದ ಸೆಮಿಫೈನಲ್ನಲ್ಲಿ ಸೌರಾಷ್ಟ್ರದ ಎದುರು 5 ವಿಕೆಟ್ಗಳಿಂದ ಸೋತಿತ್ತು. ಫೈನಲ್ನಲ್ಲಿ ವಿದರ್ಭ ತಂಡವು ಸೌರಾಷ್ಟ್ರವನ್ನು ಸೋಲಿಸಿ ಪ್ರಶಸ್ತಿ ಗೆದ್ದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.