ADVERTISEMENT

ರಣಜಿ ಟ್ರೋಫಿ ಕ್ರಿಕೆಟ್‌: ಮಯಂಕ್ ಬಳಗಕ್ಕೆ ತ್ರಿಪುರ ಸವಾಲು ಇಂದು

​ಪ್ರಜಾವಾಣಿ ವಾರ್ತೆ
Published 25 ಜನವರಿ 2024, 22:33 IST
Last Updated 25 ಜನವರಿ 2024, 22:33 IST
<div class="paragraphs"><p>ಮಯಂಕ್ ಅಗರವಾಲ್</p></div>

ಮಯಂಕ್ ಅಗರವಾಲ್

   

ಅಗರ್ತಲಾ: ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ತಂಡವು ಈ ಬಾರಿಯ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಒಂದು ಜಯ, ಒಂದು ಸೋಲು ಹಾಗೂ ಡ್ರಾ ಅನುಭವಿಸಿದೆ.

ಇದರಿಂದಾಗಿ ತಂಡದ ನಾಕೌಟ್ ಪ್ರವೇಶವು ತುಸು ಕಠಿಣವಾಗಿದೆ. ಇನ್ನುಳಿ ದಿರುವ ನಾಲ್ಕು ಪಂದ್ಯಗಳಲ್ಲಿ ಹೆಚ್ಚಿನ ಅಂತರದಲ್ಲಿ ಜಯಿಸಿದರೆ ಸಿ ಗುಂಪಿನಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಇದೆ. ಅದಕ್ಕಾಗಿ ಶುಕ್ರವಾರ ಆರಂಭವಾಗುವ ತ್ರಿಪುರ ಎದುರಿನ ಪಂದ್ಯದಲ್ಲಿ ಗೆಲುವಿನ ಹಳಿಗೆ ಮತ್ತೆ ಮರಳಬೇಕಿದೆ.

ADVERTISEMENT

ಏಕೆಂದರೆ; ಕೊನೆಯ ಮೂರು ಪಂದ್ಯಗಳಲ್ಲಿ ಕಠಿಣ ಪೈಪೋಟಿ ಯೊಡ್ಡಬಲ್ಲ ತಮಿಳುನಾಡು, ರೈಲ್ವೆಸ್ ಹಾಗೂ ಚಂಡೀಗಡ ತಂಡಗಳನ್ನು ಎದುರಿಸಬೇಕಿದೆ. ಇದ್ದುದರಲ್ಲಿ ಅನುಭವದ ಕೊರತೆ ಇರುವ ತ್ರಿಪುರ ತಂಡವನ್ನು ದೊಡ್ಡ ಅಂತರದಿಂದ ಸೋಲಿಸಿ ಸಂಪೂರ್ಣ ಪಾಯಿಂಟ್‌ಗಳನ್ನು ಜೇಬಿಗಿಳಿಸಬೇಕಿದೆ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ತ್ರಿಪುರ ತಂಡವನ್ನು ಸೋಲಿಸುವುದರಿಂದ ಮೇಲೆರುವ ಅವಕಾಶ ಮಯಂಕ್ ಬಳಗಕ್ಕೆ ಇದೆ.

ಆದರೆ ಗುಜರಾತ್ ಎದುರಿನ ಸೋಲು ಮತ್ತು ತವರಿನಂಗಳ ದಲ್ಲಿ ಗೋವಾದ ಎದುರು ಡ್ರಾ ಪಂದ್ಯಗಳಲ್ಲಿ ಕರ್ನಾಟಕದ ಆಟವು ತೃಪ್ತಿಕರವಾಗಿರಲಿಲ್ಲ. ಅಹಮದಾಬಾದಿನಲ್ಲಿ ಅಲ್ಪಮೊತ್ತ ಗುರಿಯನ್ನು ಬೆನ್ನಟ್ಟಿಯೂ ಗೆಲುವು ಕೈಚೆಲ್ಲುವಲ್ಲಿ ಬ್ಯಾಟರ್‌ಗಳ ಲೋಪ ಕಾರಣವಾಗಿತ್ತು. ಮೈಸೂರಿನಲ್ಲಿ ಗೋವಾ ಎದುರು ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಮುನ್ನಡೆ ಗಳಿಸಿದ್ದರೂ ಕೊನೆಯ ದಿನದಾಟದಲ್ಲಿ ಬೌಲರ್‌ಗಳು ಗೆಲುವು ದೊರಕಿಸಿಕೊಡುವಲ್ಲಿ ವಿಫಲರಾದರು. ‌

ಇದೀಗ ವಿದ್ವತ್ ಕಾವೇರಪ್ಪ ಭಾರತ ಎ ತಂಡದಿಂದ ರಾಜ್ಯ ತಂಡಕ್ಕೆ ಮರಳಿದ್ದಾರೆ. ಆದ್ದರಿಂದ ಶಕ್ತಿ ಹೆಚ್ಚಿದಂತಾಗಿದೆ. ಆದರೆ ಸ್ಪಿನ್ ವಿಭಾಗದಲ್ಲಿ ಅನುಭವಿ ಗಳಿಲ್ಲ. ಇದೇ ಋತುವಿನಲ್ಲಿ ಪದಾರ್ಪಣೆ ಮಾಡಿರುವ ರೋಹಿತ್ ಕುಮಾರ್ ಅವರಿಗೆ ಶಶಿಕುಮಾರ್ ಜೊತೆ ಕೊಡಬಹುದು. ಶುಭಾಂಗ್ ಹೆಗ್ಡೆ ಸ್ಥಾನ ಕಳೆದುಕೊಂಡಿದ್ದಾರೆ. 

ಬ್ಯಾಟಿಂಗ್‌ನಲ್ಲಿಯೂ ಅನುಭವಿ ಮನೀಷ್ ಪಾಂಡೆ ಗಾಯಗೊಂಡಿದ್ದು ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ದೇವದತ್ತ ಪಡಿಕ್ಕಲ್ ಕೂಡ ಭಾರತ ಎ ತಂಡದಲ್ಲಿ ಆಡಲು ತೆರಳಿದ್ದಾರೆ. ಕಳೆದ ಪಂದ್ಯದಲ್ಲಿ ಶತಕ ಬಾರಿಸಿರುವ ನಿಕಿನ್ ಜೋಸ್ ಹಾಗೂ ಮಯಂಕ್ ಅವರ ಮೇಲೆ ಹೆಚ್ಚು ಹೊಣೆ ಬಿದ್ದಿದೆ. ಡೇಗಾ ನಿಶ್ವಲ್, ಶರತ್ ಶ್ರೀನಿವಾಸ್ ಅವರಿಗೆ ಮಧ್ಯಮ ಕ್ರಮಾಂಕ ಬಲಪಡಿಸುವ ಜವಾಬ್ದಾರಿ ಇದೆ. ಕೂಚ್ ಬಿಹಾರ್ ಟ್ರೋಫಿ ಟೂರ್ನಿಯ ಚಾಂಪಿಯನ್ ತಂಡದಲ್ಲಿದ್ದ ಹಾರ್ದಿಕ್ ರಾಜ್ ಅವರಿಗೆ ಪದಾರ್ಪಣೆ ಅವಕಾಶ ಸಿಗುವ ಸಾಧ್ಯತೆ ಇದೆ. 

ಭಾರತ ತಂಡದಲ್ಲಿ ಆಡಿರುವ ಅನುಭವಿ ವಿಕೆಟ್‌ ಕೀಪರ್‌ ವೃದ್ಧಿಮಾನ್ ಸಹಾ ಅವರ ನಾಯಕತ್ವದ ತ್ರಿಪುರ ತಂಡವು ಈ ಟೂರ್ನಿಯಲ್ಲಿ ಆಡಿರುವ ಮೂರರಲ್ಲಿ ಒಂದು ಪಂದ್ಯವನ್ನೂ ಸೋತಿಲ್ಲ. ಮೊದಲ ಪಂದ್ಯದಲ್ಲಿ ಗೋವಾ ಎದುರು ತಂಡವು ಗೆದ್ದಿತ್ತು. ನಂತರ ತಮಿಳುನಾಡು ಮತ್ತು ಪಂಜಾಬ್‌ನಂತಹ ಉತ್ತಮ ತಂಡಗಳ ಎದುರಿನ ಪಂದ್ಯಗಳಲ್ಲಿ ಡ್ರಾ ಮಾಡಿಕೊಂಡಿತು.

ಪಂದ್ಯ ಆರಂಭ: ಬೆಳಿಗ್ಗೆ 9.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.