ನವದೆಹಲಿ: ರಿಷಭ್ ಪಂತ್, ಅಂಬಟಿ ರಾಯುಡು ಮತ್ತು ವೇಗದ ಬೌಲರ್ ನವ್ದೀಪ್ ಸೈನಿ ಅವರು ಭಾರತದ ವಿಶ್ವಕಪ್ ತಂಡದಲ್ಲಿ ಮೀಸಲು ಆಟಗಾರರಾಗಿ ಸ್ಥಾನ ಪಡೆದಿದ್ದಾರೆ.ಟೂರ್ನಿಗೆ ಆಯ್ಕೆ ಆಗಿರುವ 15 ಜನರ ತಂಡದಲ್ಲಿ ಯಾರಾದರೂ ಗಾಯಗೊಂಡರೆ ಇವರು ಸ್ಥಾನ ತುಂಬಲಿದ್ದಾರೆ.
ಸೋಮವಾರ ಸಬೆ ಸೇರಿದ ಆಯ್ಕೆ ಸಮಿತಿಯು ರಿಷಭ್ ಪಂತ್ ಮತ್ತು ಅಂಬಟಿ ರಾಯುಡು ಅವರನ್ನು ಕೈಬಿಟ್ಟಿತ್ತು. ಸುನಿಲ್ ಗಾವಸ್ಕರ್, ಗೌತಮ್ ಗಂಭಿರ್ ಸೇರಿದಂತೆ ಹಿರಿಯ ಕ್ರಿಕೆಟಿಗರು ಸಮಿತಿ ನಡೆಗೆ ಅಚ್ಚರಿ ವ್ಯಕ್ತಪಡಿಸಿದ್ದರು. ರಾಯುಡು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ‘ವಿಶ್ವಕಪ್ ನೋಡಲು ತ್ರಿ–ಡಿ ಕನ್ನಡಕ ಕಾಯ್ದಿರಿಸಿದ್ದೇನೆ’ ಎಂದು ವ್ಯಂಗ್ಯವಾಡಿದ್ದರು.
‘ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೂವರು ಆಟಗಾರರನ್ನು ಮೀಸಲಿಡಲು ಅವಕಾಶವಿದೆ. ಇದು ವಿಶ್ವಕಪ್ ಟೂರ್ನಿಗೂ ಅನ್ವಯ ಆಗಲಿದೆ. ಸಾಮರ್ಥ್ಯ ಮತ್ತು ಅನುಭವದ ಆಧಾರದಲ್ಲಿ ಪಂತ್ ಮತ್ತು ರಾಯುಡು ಅವರನ್ನು ಪರಿಗಣಿಸಲಾಗಿದ್ದು, ಇವರೊಂದಿಗೆ ಸೈನಿ ಕೂಡ ಸ್ಥಾನ ಪಡೆದಿದ್ದಾರೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಐಪಿಎಲ್ನಲ್ಲಿ ಗಮನಾರ್ಹ ಸಾಮರ್ಥ್ಯ ತೋರಿರುವ ಖಲೀಲ್ ಅಹಮ್ಮದ್, ಅವೇಶ್ ಖಾನ್ ಮತ್ತು ದೀಪಕ್ ಚಾಹರ್ ನೆಟ್ಸ್ನಲ್ಲಿ ಬೌಲಿಂಗ್ ಮಾಡಲು ಆಯ್ಕೆಯಾಗಿದ್ದು, ತಂಡದೊಂದಿಗೆ ಇಂಗ್ಲೆಂಡ್ಗೆ ತೆರಳಲಿದ್ದಾರೆ ಎಂದು ತಿಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.