
ದೋಹಾ: ಭಾರತ ಎ ಮತ್ತು ಪಾಕಿಸ್ತಾನ ಶಾಹೀನ್ಸ್ ತಂಡಗಳು ಇಲ್ಲಿ ನಡೆಯುತ್ತಿರುವ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಭಾನುವಾರ ನಡೆಯುವ ಹಣಾಹಣಿಯಲ್ಲಿ ಪಾಕ್ ಎ ತಂಡದ ಆಟಗಾರರ ಕೈಕುಲುಕದಿರುವ ನೀತಿಯನ್ನು ಮುಂದುವರಿಸಲು ಭಾರತ ಎ ತಂಡವು ನಿರ್ಧರಿಸಿದೆ.
ಜಿತೇಶ್ ಶರ್ಮಾ ನಾಯಕತ್ವದ ಭಾರತ ಎ ತಂಡವು ಶುಕ್ರವಾರ ಯುಎಇ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು. ಆ ಪಂದ್ಯದಲ್ಲಿ ಹದಿನಾಲ್ಕು ವರ್ಷದ ವೈಭವ್ ಸೂರ್ಯವಂಶಿ ವೇಗದ ಶತಕ ಬಾರಿಸಿದ್ದರು. ಜಂಟಿ ದಾಖಲೆ ಬರೆದಿದ್ದರು. ಇದೀಗ ಪಾಕ್ ಶಾಹೀನ್ಸ್ ತಂಡದ ಬೌಲರ್ಗಳನ್ನು ದಂಡಿಸುವ ಛಲದಲ್ಲಿ ವೈಭವ್ ಇದ್ದಾರೆ. ಜಿತೇಶ್ ಕೂಡ ಅಮೋಘ ಲಯದಲ್ಲಿದ್ದಾರೆ.
ಸೆಪ್ಟೆಂಬರ್ನಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ಟಿ20 ಕ್ರಿಕೆಟ್ ತಂಡವು ಏಷ್ಯಾ ಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಎದುರಿನ ಪಂದ್ಯಗಳಲ್ಲಿ ಆಟಗಾರರೊಂದಿಗೆ ಹಸ್ತಲಾಘವ ಮಾಡಿರಲಿಲ್ಲ. ಪೆಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದ ಭಾರತದ ಆಟಗಾರರು ಪಾಕ್ ಅಟಗಾರರ ಕೈಕುಲುಕಿರಲಿಲ್ಲ. ಮಹಿಳೆಯರ ವಿಶ್ವಕಪ್ ಟೂರ್ನಿಯಲ್ಲಿಯೂ ಭಾರತದ ಆಟಗಾರ್ತಿಯರು ಪಾಕ್ ವನಿತೆಯರ ಹಸ್ತಲಾಘವ ಮಾಡಿರಲಿಲ್ಲ. ಇದೀಗ ಭಾರತ ಎ ತಂಡವೂ ಅದೇ ದಾರಿಯಲ್ಲಿ ಸಾಗಲಿದೆ. ಪಾಕ್ ತಂಡವು ಇರ್ಫಾನ್ ಖಾನ್ ನಾಯಕತ್ವದಲ್ಲಿ ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.