ADVERTISEMENT

ರಣಜಿ ಸೆಮಿಫೈನಲ್ಸ್ ಇಂದಿನಿಂದ: ಅಯ್ಯರ್‌ಗೆ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 0:30 IST
Last Updated 2 ಮಾರ್ಚ್ 2024, 0:30 IST
<div class="paragraphs"><p>ಶ್ರೇಯಸ್‌ ಅಯ್ಯರ್‌</p></div>

ಶ್ರೇಯಸ್‌ ಅಯ್ಯರ್‌

   

ಮುಂಬೈ: ಬಿಸಿಸಿಐ ಅವಕೃಪೆಗೆ ಒಳಗಾಗಿರುವ ಶ್ರೇಯಸ್‌ ಅಯ್ಯರ್‌ ಅವರಿಗೆ ಈಗ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಸದವಕಾಶ ದೊರಕಿದೆ. ಅವರನ್ನು ಒಳಗೊಂಡ ಮುಂಬೈ ತಂಡ ಶನಿವಾರ ಆರಂಭವಾಗುವ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಎದುರಿಸಲಿದೆ.

ಮುಂಬೈ ಪರ ಕ್ವಾರ್ಟರ್‌ಫೈನಲ್ ಆಡದ್ದಕ್ಕೆ ಅವರನ್ನು ಕೇಂದ್ರೀಯ ಗುತ್ತಿಗೆ ಆಟಗಾರರ ಪಟ್ಟಿಯಿಂದ ಹೊರಗಿಡಲಾಗಿತ್ತು. ತೊಡೆ ಮತ್ತು ಬೆನ್ನು ನೋವಿನಿಂದ ಸಂಪೂರ್ಣ ಗುಣಮುಖರಾಗಿರುವ ಅವರು, ಬಾಂದ್ರಾ–ಕುರ್ಲಾ ಸೆಂಟರ್‌ (ಬಿಕೆಸಿ) ಕ್ರೀಡಾಂಗಣದಲ್ಲಿ ನಡೆಯುವ ಸೆಮಿಫೈನಲ್ ಪಂದ್ಯಕ್ಕೆ ಲಭ್ಯರಾಗಿದ್ದಾರೆ. ತಮಿಳುನಾಡು ಬ್ರಹ್ಮಾಸ್ತ್ರವಾದ ಸ್ಪಿನ್‌ ದಾಳಿಯನ್ನು ಎದುರಿಸುವಲ್ಲಿ ಅವರ ಪಾತ್ರ ಪ್ರಮುಖವಾಗಲಿದೆ.

ADVERTISEMENT

ತಮಿಳುನಾಡು ನಾಯಕ ಆರ್‌.ಸಾಯಿ ಕಿಶೋರ್ (47 ವಿಕೆಟ್) ಮತ್ತು ಇನ್ನೊಬ್ಬ ಸ್ಪಿನ್ನರ್ ಎಸ್‌.ಅಜಿತ್ ರಾಮ್ (41 ವಿಕೆಟ್‌) ಅವರು ಈ ಋತುವಿನಲ್ಲಿ ಅತಿ ಹೆಚ್ಚಿನ ವಿಕೆಟ್ ಪಡೆದಿದ್ದಾರೆ.

ಮುಂಬೈ ತಂಡಕ್ಕೆ ವಿವಿಧ ಸಂದರ್ಭಗಳಲ್ಲಿ ಬೇರೆ ಬೇರೆ ಬ್ಯಾಟರ್‌ಗಳು ನೆರವಾಗಿದ್ದು ನಾಲ್ಕರ ಘಟ್ಟಕ್ಕೆ ಬಂದು ನಿಲ್ಲಲು ಕಾರಣವಾಗಿದೆ. ನಾಯಕ ಅಜಿಂಕ್ಯ ರಹಾನೆ ಒಂದು ಅರ್ಧ ಶಕತ ಹೊಡೆದಿದ್ದು ಬಿಟ್ಟರೆ ವಿಫಲರಾಗಿದ್ದೇ ಹೆಚ್ಚು. ಈ ಋತುವಿನ ಟಾಪ್‌ 10 ಬೌಲರ್‌ಗಳಲ್ಲಿ ಮುಂಬೈನ ಯಾರೂ ಸ್ಥಾನ ಪಡೆದಿಲ್ಲ. ಮೋಹಿತ್ ಅವಸ್ಥಿ (32 ವಿಕೆಟ್) ಇದ್ದವರಲ್ಲಿ ಹೆಚ್ಚು ಯಶಸ್ವಿ ಎನಿಸಿದ್ದಾರೆ.

ತಮಿಳುನಾಡು ತಂಡದ ವಿಶೇಷ ಎಂದರೆ, ಅದು ಹಾಲಿ ಋತುವಿನಲ್ಲಿ ಈವರೆಗೆ ಪ್ರತಿಯೊಂದು ಎದುರಾಳಿಗಳನ್ನು ಎರಡು ಸಲ ಆಲೌಟ್‌ ಮಾಡಿದರುವುದು. ತಮಿಳುನಾಡು ಬ್ಯಾಟಿಂಗ್‌, ಎನ್‌.ಜಗದೀಶನ್ ಮತ್ತು ಬಾಬಾ ಇಂದ್ರಜಿತ್ ಅವರನ್ನು ನೆಚ್ಚಿಕೊಂಡಿದೆ. ಇಂದ್ರಜಿತ್‌ 686 ರನ್ ಕಲೆಹಾಕಿದ್ದಾರೆ. ಭಾರತ ತಂಡದಿಂದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ರಾಜ್ಯ ತಂಡಕ್ಕೆ ಮರಳಿದ್ದು ನೆರವಾಗಬಹುದೇ ಎಂದು ಕಾದುನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.