ಮುಂಬೈ: ರಾಷ್ಟ್ರೀಯ ಸೀನಿಯರ್ ಆಯ್ಕೆ ಸಮಿತಿಯ ಎರಡು ಸ್ಥಾನಗಳಿಗೆ ಈ ತಿಂಗಳ ಅಂತ್ಯದೊಳಗೆ ನೇಮಕ ಮಾಡಲಾಗುವುದು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಸೋಮವಾರ ತಿಳಿಸಿದ್ದಾರೆ.
ಸಮಿತಿಯ ಅಧ್ಯಕ್ಷ ಹಾಗೂ ದಕ್ಷಿಣ ವಲಯದ ಎಂ.ಎಸ್.ಕೆ. ಪ್ರಸಾದ್ ಮತ್ತು ಕೇಂದ್ರ ವಲಯದ ಗಗನ್ ಖೋಡಾ ಅವರ ಸ್ಥಾನಕ್ಕೆ ಮಂಡಳಿಯು ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಿದೆ. ಸಮಿತಿಯು ಐವರು ಸದಸ್ಯರನ್ನು ಒಳಗೊಂಡಿದೆ.
ಮಂಡಳಿಯು ಇತ್ತೀಚೆಗಷ್ಟೇ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಯನ್ನು ಹೊಸದಾಗಿ ರೂಪಿಸಿದ್ದು, ಮಾಜಿ ಆಟಗಾರರಾದ ಮದನ್ ಲಾಲ್, ರುದ್ರಪ್ರತಾಪ್ ಸಿಂಗ್ ಮತ್ತು ಸುಲಕ್ಷಣಾ ನಾಯಕ್ ಅವರನ್ನು ನೇಮಕ ಮಾಡಿತ್ತು. ‘ಹೊಸ ಸಿಎಸಿಯನ್ನು ರೂಪಿಸಲಾಗಿದೆ. ಈ ತಿಂಗಳ ಕೊನೆಯೊಳಗೆ ಅವರು ಇಬ್ಬರು ನೂತನ ಆಯ್ಕೆಗಾರರನ್ನು ಆರಿಸಲಿದ್ದಾರೆ’ ಎಂದು ಗಂಗೂಲಿ ತಿಳಿಸಿದರು.
ಅಜಿತ್ ಅಗರಕರ್, ಲಕ್ಷ್ಮಣ್ ಶಿವರಾಮಕೃಷ್ಣನ್, ಅಮೇಯ್ ಖುರಾಸಿಯಾ ಮತ್ತು ನಯನ್ ಮೋಂಗಿಯಾ ಆಯ್ಕೆಗಾರ ಸ್ಥಾನಕ್ಕೆ ಅರ್ಜಿ ಹಾಕಿದವರಲ್ಲಿ ಒಳಗೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.