ಬೆಂಗಳೂರು: ಬೌಲರ್ಗಳ ಸಾಂಘಿಕ ದಾಳಿ ಮತ್ತು ಮನೀಷ್ ಪಾಂಡೆ ಅವರ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡವು ಭಾನುವಾರ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಏಳು ವಿಕೆಟ್ಗಳಿಂದ ಸುಲಭವಾಗಿ ಮಣಿಸಿತು.
ಈ ಗೆಲುವಿನೊಂದಿಗೆ ಮಯಂಕ್ ಅಗರವಾಲ್ ಬಳಗವು ನಾಕೌಟ್ ಆಸೆಯನ್ನು ಇನ್ನಷ್ಟು ಹಸಿರಾಗಿಸಿಕೊಂಡಿತು. ಕರ್ನಾಟಕ ಆಡಿರುವ ಐದು ಪಂದ್ಯಗಳಲ್ಲಿ ಮೂರನ್ನು ಗೆದ್ದು, 12 ಅಂಕದೊಂದಿಗೆ ‘ಬಿ’ ಗುಂಪಿನಲ್ಲಿ ಮೂರನೇ ಸ್ಥಾನಕ್ಕೆ ಏರಿದೆ. ಬರೋಡಾ (16), ಗುಜರಾತ್ (16) ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿವೆ. ತಮಿಳುನಾಡು ಆರನೇ ಸ್ಥಾನಕ್ಕೆ ಕುಸಿದಿದೆ.
ಇಂದೋರ್ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ತಮಿಳುನಾಡಿನ ಬ್ಯಾಟರ್ಗಳನ್ನು ಕರ್ನಾಟಕದ ಬೌಲರ್ಗಳಾದ ವಿ.ಕೌಶಿಕ್ (10ಕ್ಕೆ 3), ವಿದ್ಯಾಧರ ಪಾಟೀಲ (20ಕ್ಕೆ 2) ಮತ್ತು ಮನೋಜ್ ಭಾಂಡಗೆ (19ಕ್ಕೆ 3) ಅವರು ಕಾಡಿದರು. ಹೀಗಾಗಿ, ಎದುರಾಳಿ ತಂಡವು 20 ಓವರ್ಗಳಲ್ಲಿ 90 ರನ್ಗೆ ಕುಸಿಯಿತು. 24 ರನ್ ಗಳಿಸಿದ ವರುಣ್ ಚಕ್ರವರ್ತಿ, ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಸುಲಭ ಗುರಿಯನ್ನು ಬೆನ್ನತ್ತಿದ ಕರ್ನಾಟಕ ತಂಡಕ್ಕೆ ಆರಂಭ ಆಟಗಾರರಾದ ಮನೀಷ್ ಪಾಂಡೆ (42; 29ಎ, 4x4, 6x2) ಮತ್ತು ಮಯಂಕ್ (30;27ಎ, 4x4) ಆಸರೆಯಾದರು. ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 76 ರನ್ ಸೇರಿಸಿದರು. ಹೀಗಾಗಿ, ತಂಡವು 11.3 ಓವರ್ಗಳಲ್ಲಿ 3 ವಿಕೆಟ್ಗೆ 93 ರನ್ ಗಳಿಸಿ ಗೆಲುವು ಸಾಧಿಸಿತು. ತಮಿಳುನಾಡಿನ ಗುರುಜಪನೀತ್ ಸಿಂಗ್ ಎರಡು ವಿಕೆಟ್ ಪಡೆದರು.
ಕರ್ನಾಟಕ ತಂಡವು ಮಂಗಳವಾರ ಬರೋಡಾವನ್ನು, ಗುರುವಾರ ಗುಜರಾತ್ ತಂಡವನ್ನು ಎದುರಿಸಲಿದೆ. ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆಯಲು ಈ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡವಿದೆ.
ಸ್ಕೋರುಗಳು:
ತಮಿಳುನಾಡು: 20 ಓವರುಗಳಲ್ಲಿ 90 (ವರುಣ್ ಚಕ್ರವರ್ತಿ 24; ವಾಸುಕಿ ಕೌಶಿಕ್ 10ಕ್ಕೆ3, ವಿದ್ಯಾಧರ ಪಾಟೀಲ 20ಕ್ಕೆ2, ವಿಜಯಕುಮಾರ್ ವೈಶಾಖ 27ಕ್ಕೆ1, ಶ್ರೇಯಸ್ ಗೋಪಾಲ್ 14ಕ್ಕೆ1, ಮನೋಜ್ ಭಾಂಡಗೆ 19ಕ್ಕೆ3); ಕರ್ನಾಟಕ: 11.3 ಓವರುಗಳಲ್ಲಿ 3 ವಿಕೆಟ್ಗೆ 93 (ಮನೀಷ್ ಪಾಂಡೆ 42, ಮಯಂಕ್ ಅಗರವಾಲ್ 30; ಗುರುಜಪನೀತ್ ಸಿಂಗ್ 15ಕ್ಕೆ2, ವರುಣ್ ಚಕ್ರವರ್ತಿ 24ಕ್ಕೆ1). ಫಲಿತಾಂಶ: ಕರ್ನಾಟಕಕ್ಕೆ 7 ವಿಕೆಟ್ ಜಯ, 4 ಅಂಕ. ಪಂದ್ಯದ ಆಟಗಾರ: ಮನೀಷ್ ಪಾಂಡೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.