ADVERTISEMENT

ಲಖನೌ ಪಿಚ್ ಆಘಾತಕಾರಿಯಾಗಿತ್ತು: ಹಾರ್ದಿಕ್ ಪಾಂಡ್ಯ

​ಪ್ರಜಾವಾಣಿ ವಾರ್ತೆ
Published 30 ಜನವರಿ 2023, 4:05 IST
Last Updated 30 ಜನವರಿ 2023, 4:05 IST
   

ಲಖನೌ: ಭಾನುವಾರ ನ್ಯೂಜಿಲೆಂಡ್ ವಿರುದ್ಧ ಎರಡನೇ ಟಿ–20 ಪಂದ್ಯ ನಡೆದ ಲಖನೌದ ಕ್ರಿಕೆಟ್ ಮೈದಾನದ ಪಿಚ್ ಗುಣಮಟ್ಟದ ಬಗ್ಗೆ ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಆಘಾತ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನ್ಯೂಜಿಲೆಂಡ್ ವಿರುದ್ಧದ ಟಿ–20 ಸರಣಿಗೆ ಸಿದ್ಧಪಡಿಸಲಾಗಿರುವ ಪಿಚ್‌ಗಳ ಬಗ್ಗೆ ಆಕ್ಷೇಪ ಎತ್ತಿದ್ದಾರೆ.

ಮೊದಲ ಟಿ–20 ಪಂದ್ಯ ನಡೆದ ರಾಂಚಿಯ ಪಿಚ್ ನಿಧಾನಗತಿಯದ್ದಾಗಿತ್ತು. ಎರಡನೇ ಪಂದ್ಯದ ಲಖನೌ ಪಿಚ್ ಮತ್ತಷ್ಟು ನಿಧಾನಗತಿಯದ್ದಾಗಿತ್ತು. ಇಲ್ಲಿ ಭಾರತ ತಂಡ, ನ್ಯೂಜಿಲೆಂಡ್ ಅನ್ನು 99 ರನ್‌ಗಳಿಗೆ ನಿಯಂತ್ರಿಸಿತು. ಆದರೆ, ಭಾರತ ತಂಡವೂ ಸಹ ಸಾಧಾರಣ ಗುರಿಯನ್ನು ಮುಟ್ಟಲು ಹೆಣಗಾಡಿತು. ಕೇವಲ ಒಂದು ಎಸೆತ ಬಾಕಿ ಇರುವಂತೆ ಗೆಲುವಿನ ತಡ ಸೇರಿತು.

‘ಪ್ರಾಮಾಣಿಕವಾಗಿ ಹೇಳುವುದಾದರೆ ಇದೊಂದು ಶಾಕಿಂಗ್ ಪಿಚ್. ಈವರೆಗೆ ನಾವು ಎರಡು ಪಂದ್ಯ ಆಡಿದ್ದೇವೆ. ಕಠಿಣ ಪಿಚ್‌ಗಳ ಬಗ್ಗೆ ನನಗೆ ಚಿಂತೆ ಇಲ್ಲ. ಆದರೆ, ಈ ಎರಡೂ ಪಂದ್ಯಗಳು ನಡೆದ ಪಿಚ್‌ಗಳನ್ನು ಟಿ–20 ಪಂದ್ಯಕ್ಕೆ ಸೂಕ್ತವಾದ ರೀತಿಯಲ್ಲಿ ಸಿದ್ಧಪಡಿಸಿರಲಿಲ್ಲ’ ಎಂದು ಅವರು ಹೇಳಿದರು.

ADVERTISEMENT

'ಕ್ಯುರೇಟರ್‌ಗಳು ಅಥವಾ ಮೈದಾನದ ಸಿಬ್ಬಂದಿ ಮುಂಬರುವ ಪಂದ್ಯಗಳಿಗೆ ಪಿಚ್‌ಗಳನ್ನು ಸೂಕ್ತ ರೀತಿಯಲ್ಲಿ ಸಿದ್ಧಪಡಿಸಿರಬೇಕು. ಮೊದಲ ಟಿ–20 ಪಂದ್ಯದ ಗುರಿ ಸಹ ಚೇಸ್ ಮಾಡುವಂತಿತ್ತು’ ಎಂದು ಹಾರ್ದಿಕ್ ಹೇಳಿದರು.

ಸರಣಿಯ ಅಂತಿಮ ಪಂದ್ಯ ಬುಧವಾರ, ಅಹಮದಾಬಾದ್‌ನಲ್ಲಿ ನಡೆಯಲಿದೆ.

ಪಂದ್ಯದ ರೋಚಕ ಅಂತ್ಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಾವು ಆದಷ್ಟು ಬೇಗ ಚೇಸಿಂಗ್ ಮುಗಿಸಬೇಕೆಂದುಕೊಂಡಿದ್ದೆವು. ಆದರೆ, ತುಂಬಾ ನಿಧಾನವಾಯಿತು. ಒತ್ತಡವನ್ನು ತೆಗೆದುಕೊಳ್ಳುವ ಬದಲು ಸ್ಟ್ರೈಕ್ ರೊಟೇಟ್ ಮಾಡುತ್ತಾ ಆಡಿದೆವು. ಆ ಸಂದರ್ಭ ಅಗತ್ಯಾನುಸಾರ ಮಾಡಿದೆವು’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.