ನವದೆಹಲಿ: ‘ಕುಟುಂಬವು ಎಲ್ಲ ಪ್ರಯತ್ನಗಳನ್ನೂ ಮಾಡಿತು. ಆದರೂ ಅಮ್ಮ ಮತ್ತು ಅಕ್ಕನನ್ನು ಉಳಿಸಿಕೊಳ್ಳಲು ಆಗಲಿಲ್ಲ. ಕೋವಿಡ್–19 ಅವರಿಬ್ಬರ ಪ್ರಾಣ ಅಪಹರಿಸಿತು...’
ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರ ಮಾತುಗಳು ಇವು. ಎರಡು ವಾರಗಳ ಅಂತದಲ್ಲಿ ವೇದಾ ಅವರು ತಾಯಿ ಚೆಲುವಾಂಬ ದೇವಿ ಹಾಗೂ ಸಹೋದರಿ ವತ್ಸಲಾ ಶಿವಕುಮಾರ್ ಅವರನ್ನು ಕಳೆದುಕೊಂಡಿದ್ದರು.
ಅವರಿಬ್ಬರನ್ನು ನೆನೆದುಕೊಂಡು ಭಾವುಕರಾಗಿರುವ 28 ವರ್ಷದ ವೇದಾ ‘ಇದು ಅತ್ಯಂತ ಅಪಾಯಕಾರಿ ವೈರಸ್. ಕುಟುಂಬದವರ ಪ್ರಯತ್ನಗಳನ್ನೆಲ್ಲ ವಿಫಲಗೊಳಿಸಿ ಅದು ಮೇಲುಗೈ ಸಾಧಿಸಿತ್ತು. ನನ್ನ ಹಾಗೆ ಕುಟುಂಬ ಸದಸ್ಯರನ್ನು ಕಳೆದುಕೊಂಡವರ ಸಂಕಟ ಹೇಳತೀರದು. ಹೀಗಾಗಿ ಯಾರೂ ಕೊರೊನಾ ವೈರಸನ್ನು ಲಘುವಾಗಿ ಕಾಣಬೇಡಿ. ಸುರಕ್ಷಿತವಾಗಿರಿ, ಸುಭದ್ರವಾಗಿರಿ’ ಎಂದು ಹೇಳಿದ್ದಾರೆ.
ಸಾಮಾಜಿಕ ತಾಣಗಳ ಮೂಲಕ ಜನರಿಗೆ ನೆರವಾಗುತ್ತಿರುವ ವೇದಾ ಕುಟುಂಬದಲ್ಲಿ ಸಂಭವಿಸಿರುವ ದುರಂತದ ಆಘಾತದಿಂದ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ.
‘ನಿಮ್ಮಿಬ್ಬರ ಅಗಲಿಕೆ ಅಸಹನೀಯ. ನೀವಿಲ್ಲದೆ ಕುಟುಂಬದಲ್ಲಿ ಸಂಭ್ರಮ ಮೂಡುವುದಾದರೂ ಹೇಗೆ. ನಿಮ್ಮ ನಷ್ಟವನ್ನು ಭರಿಸುವುದು ಕಷ್ಟ. ನೆಚ್ಚಿನ ಅಮ್ಮ ಮತ್ತು ಅಕ್ಕ, ಕಳೆದ ಕೆಲವು ದಿನಗಳಿಂದ ನಾವೆಲ್ಲ ದು:ಖದ ಮಡುವಿನಲ್ಲಿದ್ದೇವೆ. ನೀವಿಬ್ಬರೂ ನಮ್ಮ ಕುಟುಂಬದ ಆಧಾರಸ್ತಂಭ. ಅಮ್ಮ, ನೀನು ನನ್ನಲ್ಲಿ ಧೈರ್ಯ ತುಂಬಿದೆ, ಬದುಕಿನಲ್ಲಿ ಛಲದಿಂದ ಮುನ್ನುಗ್ಗಲು ಕಲಿಸಿದೆ. ಅಕ್ಕ, ಹೋರಾಟಗಾರ್ತಿಯಾದ ನೀನು ನನಗೆ ಪ್ರೇರಣೆಯಾದೆ’ ಎಂದು ವೇದಾ ಹೇಳಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.