ADVERTISEMENT

ಕ್ರಿಕೆಟ್‌: ಮಯಂಕ್ ಪಡೆಗೆ ಸವಾಲಿನ ಹಾದಿ

ಕ್ರಿಕೆಟ್‌: ಕರ್ನಾಟಕ– ಜಾರ್ಖಂಡ್ ಪ್ರೀಕ್ವಾರ್ಟರ್ ಇಂದು

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 19:16 IST
Last Updated 25 ನವೆಂಬರ್ 2022, 19:16 IST
ಮನೀಷ್ ಪಾಂಡೆ, ವಿ. ಕೌಶಿಕ್ ಹಾಗೂ ಮಯಂಕ್ ಅಗರವಾಲ್‌
ಮನೀಷ್ ಪಾಂಡೆ, ವಿ. ಕೌಶಿಕ್ ಹಾಗೂ ಮಯಂಕ್ ಅಗರವಾಲ್‌   

ಅಹಮದಾಬಾದ್: ಗುಂಪು ಹಂತದಲ್ಲಿ ಅನುಭವಿಸಿದ ಒಂದು ಸೋಲಿನಿಂದಾಗಿ ಕರ್ನಾಟಕ ತಂಡವು ಎಂಟರ ಘಟ್ಟಕ್ಕೆ ನೇರಪ್ರವೇಶದ ಅವಕಾಶ ಕಳೆದುಕೊಂಡಿದೆ. ಆದರೆ, ಪ್ರಶಸ್ತಿ ಜಯಿಸುವ ಕನಸು ನನಸು ಮಾಡಿಕೊಳ್ಳಲು ಇನ್ನೂ ಅವಕಾಶ ಇದೆ.

ಅದಕ್ಕಾಗಿ ನಾಲ್ಕು ಸವಾಲುಗಳನ್ನು ಮೀರಿ ನಿಲ್ಲಬೇಕಿದೆ. ಈ ಹಾದಿಯ ಮೊದಲ ಸವಾಲು ಶನಿವಾರ ನಡೆಯಲಿರುವ ಪ್ರೀಕ್ವಾರ್ಟರ್‌ಫೈನಲ್ ಪಂದ್ಯ. ಈ ಹಣಾಹಣಿಯಲ್ಲಿ ಮಯಂಕ್ ಅಗರವಾಲ್ ಬಳಗವು ಜಾರ್ಖಂಡ್ ತಂಡವನ್ನು ಎದುರಿಸಲಿದೆ. ಬಿ ಗುಂಪಿನ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಅದರಲ್ಲಿ ಕರ್ನಾಟಕ ಗೆದ್ದಿತ್ತು.

ಆದರೆ, ಆರಂಭಿಕ ಜೋಡಿ ಮಯಂಕ್ ಮತ್ತು ಸಮರ್ಥ್ ಅವರ ಬ್ಯಾಟಿಂಗ್‌ ಲಯದಲ್ಲಿರುವ ಅಸ್ಥಿರತೆ ತಂಡದ ಜಿಂತೆಗೆ ಕಾರಣವಾಗಿದೆ. ಹೊಸಪ್ರತಿಭೆ ನಿಕಿನ್ ಜೋಸ್, ಅನುಭವಿ ಮನೀಷ್ ಪಾಂಡೆ, ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಅವರು ಉತ್ತಮವಾಗಿ ಆಡುತ್ತಿದ್ದಾರೆ. ಅವರು ನಾಕೌಟ್ ಹಂತದಲ್ಲಿಯೂ ತಮ್ಮ ಸಾಮರ್ಥ್ಯ ಮೆರೆದರೆ ತಂಡಕ್ಕೆ ಉಪಯುಕ್ತವಾಗಬಹುದು.

ADVERTISEMENT

ಬೌಲಿಂಗ್ ವಿಭಾಗದಲ್ಲಿ ಅನುಭವಿ ರೋನಿತ್ ಮೋರೆ, ಸ್ಪಿನ್ನರ್ ಕೆ. ಗೌತಮ್, ವಿ. ಕೌಶಿಕ್ ಹಾಗೂ ವಿದ್ವತ್ ಕಾವೇರಪ್ಪ ಅವರು ಎದುರಾಳಿ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ತಂತ್ರಗಾರಿಕೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರೆ ಕ್ವಾರ್ಟರ್‌ಫೈನಲ್‌ಗೆ ಸಾಗುವ ಕನಸು ಕೈಗೂಡಬಹುದು.

ಐಪಿಎಲ್‌ನಲ್ಲಿ ಮಿಂಚಿದ್ದ ವಿರಾಟ್ ಸಿಂಗ್, ಶಹಬಾಜ್ ನದೀಂ ಅವರು ಇರುವ ಜಾರ್ಖಂಡ್ ತಂಡವು ಈ ಅವಕಾಶವನ್ನು ಬಳಸಿಕೊಂಡು ಪ್ರಶಸ್ತಿ ಗೆಲುವಿನ ಆಸೆಯನ್ನು ಜೀವಂತವಾಗುಳಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.