ADVERTISEMENT

ವಿಜಯ್ ಹಜಾರೆ ಟ್ರೋಫಿ: ಮಹಾರಾಷ್ಟ್ರ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಸೌರಾಷ್ಟ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಡಿಸೆಂಬರ್ 2022, 15:02 IST
Last Updated 2 ಡಿಸೆಂಬರ್ 2022, 15:02 IST
ಸೌರಾಷ್ಟ್ರ ತಂಡ (ಚಿತ್ರಕೃಪೆ: Twitter / @BCCIdomestic)
ಸೌರಾಷ್ಟ್ರ ತಂಡ (ಚಿತ್ರಕೃಪೆ: Twitter / @BCCIdomestic)   

ಅಹಮದಾಬಾದ್: ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಬಲಿಷ್ಠ ಮಹಾರಾಷ್ಟ್ರ ತಂಡವನ್ನು 5 ವಿಕೆಟ್‌ ಅಂತರದಿಂದ ಮಣಿಸಿದ ಸೌರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮಹಾರಾಷ್ಟ್ರ ತಂಡ, ನಾಯಕ ಋತುರಾಜ್ ಗಾಯಕವಾಡ್‌ (108) ಶತಕದ ಬಲದಿಂದ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 248 ರನ್ ಕಲೆಹಾಕಿತ್ತು.

ಈ ಗುರಿ ಬೆನ್ನತ್ತಿದ ಸೌರಾಷ್ಟ್ರಕ್ಕೆ ಆರಂಭಿಕರಾದ ಹಾರ್ವಿಕ್‌ ದೇಸಾಯಿ ಮತ್ತು ಶೆಲ್ಡನ್‌ ಜಾಕ್ಸನ್‌ ಉತ್ತಮ ಅಡಿಪಾಯ ಹಾಕಿಕೊಟ್ಟರು. ಈ ಜೋಡಿ ಮೊದಲ ವಿಕೆಟ್‌ ಪಾಲುದಾರಿಕೆಯಲ್ಲಿ 125 ರನ್‌ ಕಲೆಹಾಕಿತು.ದೇಸಾಯಿ ಅರ್ಧಶತಕ(50 ರನ್) ಸಿಡಿಸಿ ಔಟಾದ ನಂತರವೂ ಸೊಗಸಾಗಿ ಬ್ಯಾಟ್‌ ಬೀಸಿದ ಜಾಕ್ಸನ್‌ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದರು.

ADVERTISEMENT

136 ಎಸೆತಗಳನ್ನು ಎದುರಿಸಿದ ಅವರು 12 ಬೌಂಡರಿ ಮತ್ತು 5 ಸಿಕ್ಸರ್ ಸಹಿತ 133 ರನ್ ಗಳಿಸಿದರು. ಅವರ ಆಟದ ಬಲದಿಂದ ಸೌರಾಷ್ಟ್ರ ತಂಡ ಇನ್ನೂ 23 ಎಸೆತಗಳು ಬಾಕಿ ಇರುವಂತೆಯೇ ಜಯದ ನಗೆ ಬೀರಿತು.

ಜಾಕ್ಸನ್‌ ಪಂದ್ಯ ಶ್ರೇಷ್ಠ ಎನಿಸಿದರೆ, ಐದು ಪಂದ್ಯಗಳ ಐದು ಇನಿಂಗ್ಸ್‌ಗಳಿಂದ 660 ರನ್‌ ಕಲೆಹಾಕಿದ ಋತುರಾಜ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.