
ರಿಷಭ್ ಪಂತ್
(ಪಿಟಿಐ ಚಿತ್ರ)
ಬೆಂಗಳೂರು: ಭಾರತ ತಂಡದ ವಿಕೆಟ್ ಕೀಪರ್–ಬ್ಯಾಟರ್ ರಿಷಭ್ ಪಂತ್ ಸೇರಿದಂತೆ ದೆಹಲಿಯ ಪ್ರಮುಖ ಬ್ಯಾಟರ್ಗಳು ವಿಫಲರಾಗುವ ಮೂಲಕ ದೆಹಲಿ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಈ ಬಾರಿ ಮೊದಲ ಸೋಲು ಕಂಡಿತು.
ಆಲೂರಿನ ಕೆಎಸ್ಸಿಎ ಮೈದಾನದಲ್ಲಿ ಒಡಿಶಾ ತಂಡವು ಬುಧವಾರ ನಡೆದ ‘ಡಿ’ ಗುಂಪಿನ ಈ ಪಂದ್ಯದಲ್ಲಿ 79 ರನ್ಗಳ ಸುಲಭ ಜಯ ಸಾಧಿಸಿತು. ಜನವರಿ ಮೊದಲ ಬಾರಿ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಗೆ ಆಯ್ಕೆಗಾರರು ತಂಡ ಪ್ರಕಟಿಸಲು ಸಜ್ಜಾಗಿದ್ದು, ಪಂತ್ ಆಟದ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು.
ಆದರೆ ಬೀಸುಹೊಡೆತಗಳ ಆಟಗಾರ 24 ರನ್ ಗಳಿಸಲಷ್ಟೇ ಶಕ್ತರಾದರು. ಒಡಿಶಾ ತಂಡದ 8 ವಿಕೆಟ್ಗೆ 272 ರನ್ಗಳಿಗೆ ಉತ್ತರವಾಗಿ ದೆಹಲಿ ತಂಡವು 43.3 ಓವರುಗಳಲ್ಲಿ 193 ರನ್ಗಳಿಗೆ ಆಲೌಟ್ ಆಯಿತು.
ಒಡಿಶಾ ಈ ಗೆಲುವಿನೊಡನೆ 12 ಪಾಯಿಂಟ್ಗಳೊಡನೆ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು. ನಿವ್ವಳ ರನ್ ದರವೂ ಸುಧಾರಿಸಿದ ಕಾರಣ ಅದು ಇಷ್ಟೇ ಅಂಕ ಗಳಿಸಿದ ರೈಲ್ವೇಸ್, ಹರಿಯಾಣ ಮತ್ತು ದೆಹಲಿ ತಂಡಗಳನ್ನು ಹಿಂದೆಹಾಕಿತು.
ಪಂತ್ ಈ ಟೂರ್ನಿಯಲ್ಲಿ 5, 70, 22 ಮತ್ತು 24 ರನ್ಗಳನ್ನಷ್ಟೇ ಗಳಿಸಿದ್ದಾರೆ. ಮಧ್ಯಮ ವೇಗಿ ದೇವವ್ರತ ಪ್ರಧಾನ್ (28ಕ್ಕೆ3) ಮತ್ತು ಸಂಬಿತ್ ಬರಲ್ (34ಕ್ಕೆ3) ದೆಹಲಿ ಕುಸಿತಕ್ಕೆ ಕಾರಣರಾದರು.
ಒಡಿಶಾ ಪರ ನಾಯಕ ಬಿಪ್ಲಬ್ ಸಮಂತರಾಯ್ 72 ಎಸೆತಗಳಲ್ಲಿ 74 ರನ್ ಗಳಿಸಿ ಮಿಂಚಿದರು.
ಸ್ಕೋರುಗಳು:
ಒಡಿಶಾ: 50 ಓವರುಗಳಲ್ಲಿ 8ಕ್ಕೆ 272 (ಓಂ ಟಿ.ಮುಂಢೆ 26, ಸ್ವಸ್ತಿಕ್ ಸಮಾಲ್ 28, ಗೋವಿಂದ ಪೊದ್ದಾರ್ 35, ಬಿಪ್ಲಬ್ ಸಮಂತರಾಯ್ 72; ಪ್ರಿನ್ಸ್ ಯಾದವ್ 57ಕ್ಕೆ2, ಹೃತಿಕ್ ಶೊಕೀನ್ 27ಕ್ಕೆ4);
ದೆಹಲಿ: 42.3 ಓವರುಗಳಲ್ಲಿ 193 (ಆಯುಷ್ ದೊಸೇಜ 28, ರಿಷಭ್ ಪಂತ್ 24, ಹರ್ಷ್ ತ್ಯಾಗಿ 43, ಹೃತಿಕ್ ಶೊಕೀನ್ 32, ದಿವಿಜ್ ಮೆಹ್ರಾ 27; ರಾಜೇಶ್ ಮೊಹಾಂತಿ 42ಕ್ಕೆ2, ದೇವವ್ರತ ಪ್ರಧಾನ್ 28ಕ್ಕೆ3, ಸಂಬಿತ್ ಬರಲ್ 34ಕ್ಕೆ3). ಪಂದ್ಯದ ಆಟಗಾರ: ಬಿಪ್ಲಬ್ ಸಮಂತರಾಯ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.