ವೆಲಿಂಗ್ಟನ್: ‘ನ್ಯೂಜಿಲೆಂಡ್ ವಿರುದ್ಧ ನಿರ್ಣಾಯಕ ಎರಡನೇ ಟೆಸ್ಟ್ನಲ್ಲಿ ಅತಿಯಾದ ರಕ್ಷಣಾತ್ಮಕ ಆಟಕ್ಕೆ ಮೊರೆಹೋಗುವುದನ್ನು ಬಿಟ್ಟುಬಿಡ ಬೇಕು. ಹೊರದೇಶಗಳಲ್ಲಿ ಆಡುವಾಗ ಅದು ಪ್ರಯೋಜನಕ್ಕೆ ಬರುವುದಿಲ್ಲ’ ಎಂದು ಭಾರತ ತಂಡದ ಬ್ಯಾಟ್ಸಮನ್ನರಿಗೆ ನಾಯಕ ವಿರಾಟ್ ಕೊಹ್ಲಿ ಕಿವಿಮಾತು ಹೇಳಿದ್ದಾರೆ.
ಬೇಸಿನ್ ರಿಸರ್ವ್ನಲ್ಲಿ ನಡೆದ ಮೊದಲ ಕ್ರಿಕೆಟ್ ಟೆಸ್ಟ್ನಲ್ಲಿ ಭಾರತ 10 ವಿಕೆಟ್ಗಳ ಸೋಲನುಭವಿಸಿತ್ತು. ವೇಗಿಗಳಿಗೆ ಸ್ನೇಹಿಯಾಗಿದ್ದ ಪಿಚ್ನಲ್ಲಿ ತಂಡ ಎರಡೂ ಇನಿಂಗ್ಸ್ಗಳಲ್ಲಿ 200ರ ಗಡಿ ದಾಟಲು ಆಗಿರಲಿಲ್ಲ.
‘ನಮ್ಮ ಆಟದ ಭಾಷೆ ಬದಲಾಗಬೇಕಾಗಿದೆ. ಅತಿಯಾದ ಎಚ್ಚರಿಕೆಯ ಆಟದಿಂದ ಸಹಜವಾಗಿ ಹೊಮ್ಮುವ ಹೊಡೆತಗಳು ನಿಂತುಹೋಗುವ ಅಪಾಯವಿದೆ’ ಎಂದು ಮೊದಲ ಟೆಸ್ಟ್ ಕೊಹ್ಲಿ ಪಂದ್ಯದ ನಂತರ ಹೇಳಿದ್ದರು.
ತಾಂತ್ರಿಕವಾಗಿ ಪ್ರಬಲರಾದ ಚೇತೇ ಶ್ವರ್ ಪೂಜಾರ 11 ರನ್ ಗಳಿಸಲು 81 ಎಸೆತ ತೆಗೆದುಕೊಂಡಿದ್ದರು. ಹನುಮ ವಿಹಾರಿ 15 ರನ್ ಗಳಿಸುವಷ್ಟರಲ್ಲಿ 79 ಎಸೆತಗಳನ್ನು ಆಡಿದ್ದರು. ಒಂದು ಹಂತದಲ್ಲಿ ಪೂಜಾರ ಎದುರಿಸಿದ್ದ 28 ಎಸೆತಗಳು ‘ಡಾಟ್ ಬಾಲ್’ ಆಗಿದ್ದವು. ಇದರಿಂದ ಹೊಡೆತಕ್ಕೆ ಹೋಗುವ ಅನಿವಾರ್ಯತೆಯಲ್ಲಿ ಮಯಂಕ್ ಅಗರವಾಲ್ ವಿಕೆಟ್ ತೆತ್ತಿದ್ದರು.
ಎದುರಾಳಿಗಳಿಗೆ ಆಕ್ರಮಣದ ಆಟದ ಮೂಲಕ ಉತ್ತರ ನೀಡುವ ಮನೋಭಾವಕ್ಕೆ ಹೆಸರಾಗಿರುವ ಕೊಹ್ಲಿ, ಕೆಲವು ಆಟಗಾರರು ಅದೇ ರೀತಿಯ ಸಾಹಸಕ್ಕೆ ಮುಂದಾಗಬೇಕೆಂಬ ಒಲವು ಹೊಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.