ADVERTISEMENT

ಧೋನಿ ನಿವೃತ್ತಿಯಿಂದ ಕ್ರಿಕೆಟ್‌ನ ಒಂದು ಯುಗಾಂತ್ಯ: ಶ್ರೀನಿವಾಸನ್

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 14:58 IST
Last Updated 18 ಆಗಸ್ಟ್ 2020, 14:58 IST
ಎನ್. ಶ್ರೀನಿವಾಸನ್ ಮತ್ತು ಮಹೇಂದ್ರಸಿಂಗ್ ಧೋನಿ
ಎನ್. ಶ್ರೀನಿವಾಸನ್ ಮತ್ತು ಮಹೇಂದ್ರಸಿಂಗ್ ಧೋನಿ   

ಚೆನ್ನೈ: ದಿಗ್ಗಜ ಮಹೇಂದ್ರಸಿಂಗ್ ಧೋನಿ ನಿವೃತ್ತಿಯೊಂದಿಗೆ ಕ್ರಿಕೆಟ್‌ನ ಒಂದು ಯುಗ ಮುಕ್ತಾಯವಾದಂತಾಗಿದೆ. ಈ ಕ್ರೀಡೆಯಲ್ಲಿ ಅವರು ಎಲ್ಲವನ್ನೂ ಸಾಧಿಸಿದ್ದಾರೆ. ಇನ್ನೇನೂ ಉಳಿದಿಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಆಭಿಪ್ರಾಯಪಟ್ಟಿದ್ದಾರೆ.

ಆಗಸ್ಟ್‌ 15ರಂದು ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಉದ್ಯಮಿ ಶ್ರೀನಿವಾಸನ್ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸಹಮಾಲೀಕರು ಹೌದು. ಧೋನಿ ಆ ತಂಡದ ನಾಯಕರಾಗಿದ್ದಾರೆ.

ಈ ಕುರಿತು ಮಂಗಳವಾರ ಪ್ರತಿಕ್ರಿಯಿಸಿದ ಶ್ರೀನಿವಾಸನ್, ’ಧೋನಿ 2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್, ನಂತರದಲ್ಲಿ ಚಾಂಪಿಯನ್ಸ್‌ ಟ್ರೋಫಿ ಗೆದ್ದ ತಂಡದ ನಾಯಕತ್ವ ವಹಿಸಿದವರು. ಅದ್ಭುತ ವಿಕೆಟ್‌ಕೀಪರ್, ಅಮೋಘ ಬ್ಯಾಟ್ಸ್‌ಮನ್ ಮತ್ತು ಅಮೋಘವಾದ ನಾಯಕ ಅವರು. ಇಡೀ ತಂಡವನ್ನು ಹುರಿದುಂಬಿಸಿ ಮುನ್ನಡೆಸುತ್ತಿದ್ದ ರೀತಿ ಅನನ್ಯ‘ ಎಂದು ಬಣ್ಣಿಸಿದ್ದಾರೆ.

ADVERTISEMENT

’ಕ್ರಿಕೆಟ್‌ನಲ್ಲಿ ಗರಿಷ್ಠ ಮಟ್ಟದ ಸಾಧನೆಗಳನ್ನು ಮಾಡಿಬಿಟ್ಟಿದ್ದಾರೆ. ಇನ್ನೇನು ಬೇಕು. ಪ್ರತಿಯೊಬ್ಬ ಕ್ರೀಡಾಪಟುವೂ ತಮ್ಮ ಜೀವನದ ಒಂದು ಹಂತದಲ್ಲಿ ವಿದಾಯದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅದು ಯಾವಾಗ ಎಂಬುದು ಅವರಿಗೇ ಚೆ್ನ್ನಾಗಿ ಗೊತ್ತಿರುತ್ತದೆ. ಆದರೆ, ಧೋನಿ ಇನ್ನು ಮುಂದೆ ನೀಲಿ ವರ್ಣದ (ಭಾರತ ತಂಡದ ಪೋಷಾಕು) ಜೆರ್ಸಿಯಲ್ಲಿ ಕಾಣಸಿಗುವುದಿಲ್ಲ ಎಂಬ ದುಃಖವಿದೆ. ಆದರೆ ಸಿಎಸ್‌ಕೆಯಲ್ಲಿ ಅವರು ಮುಂದುವರಿಯಲಿರುವುದು ಸಂತಸ ತಂದಿದೆ‘ ಎಂದು ಶ್ರೀನಿವಾಸನ್ ಹೇಳಿದ್ದಾರೆ.

’ಸಿಎಸ್‌ಕೆ ಜಾಗತಿಕ ಮಟ್ಟದ ಬ್ರ್ಯಾಂಡ್ ಆಗಿದೆ. ಆದ್ದರಿಂದ ಧೋನಿ ಅವರು ಈ ತಂಡವನ್ನು ಮುನ್ನಡೆಸುವುದನ್ನು ನೋಡಲು ಅಭಿಮಾನಿಗಳು ಇಷ್ಟಪಡುತ್ತಾರೆ. ಮೊದಲಿನಿಂದಲೂ ಅವರೇ ನಾಯಕರಾಗಿದ್ದಾರೆ. ಇನ್ನಷ್ಟು ವರ್ಷಗಳ ಕಾಲ ಅವರೇ ಇರುತ್ತಾರೆ‘ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

’ಪ್ರತಿಭಾನ್ವಿತರನ್ನು ಗುರುತಿಸಿ ಬೆಳೆಸುವ ವಿಶಿಷ್ಟ ಗುಣ ಧೋನಿಯಲ್ಲಿದೆ. ಪ್ರತಿಭಾಶೋಧದಲ್ಲಿ ಅವರಿಗೆ ಅಪರೂಪದ ತಂತ್ರಗಾರಿಕೆ ಸಿದ್ಧಿಸಿದೆ. ಅವರು ಸಲಹೆಯಿಂದಾಗಿ ಸಿಎಸ್‌ಕೆಗೆ ಆಯ್ಕೆಯಾದ ಬಹಳಷ್ಟು ಆಟಗಾರರು ಈಗ ಉನ್ನತ ಸಾಧಕರಾಗಿದ್ದಾರೆ‘ ಎಂದು 75 ವರ್ಷದ ಶ್ರೀನಿವಾಸನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.