ADVERTISEMENT

ರಾಯ್‌ ಕೃಷ್ಣ ಮೇಲೆ ಕಣ್ಣು

ಐಎಸ್‌ಎಲ್‌: ಎಟಿಕೆ ಮೋಹನ್‌ ಬಾಗನ್‌–ಒಡಿಶಾ ಎಫ್‌ಸಿ ಹಣಾಹಣಿ ಇಂದು

ಪಿಟಿಐ
Published 2 ಡಿಸೆಂಬರ್ 2020, 14:55 IST
Last Updated 2 ಡಿಸೆಂಬರ್ 2020, 14:55 IST
ಎಟಿಕೆ ಮೋಹನ್ ಬಾಗನ್‌ ತಂಡವು ರಾಯ್‌ಕೃಷ್ಣ (ಎಡ) ಮೇಲೆ ಭರವಸೆ ಇಟ್ಟಿದೆ– ಐಎಸ್‌ಎಲ್‌ ಮೀಡಿಯಾ ಚಿತ್ರ
ಎಟಿಕೆ ಮೋಹನ್ ಬಾಗನ್‌ ತಂಡವು ರಾಯ್‌ಕೃಷ್ಣ (ಎಡ) ಮೇಲೆ ಭರವಸೆ ಇಟ್ಟಿದೆ– ಐಎಸ್‌ಎಲ್‌ ಮೀಡಿಯಾ ಚಿತ್ರ   

ಮಡಗಾಂವ್‌: ಐ–ಲೀಗ್‌ ಟೂರ್ನಿ ವಿಜೇತ ಎಟಿಕೆ ಮೋಹನ್ ಬಾಗನ್‌ ತಂಡವು ತನ್ನ ಜಯದ ಓಟವನ್ನು ಮುಂದುವರಿಸುವ ಹಂಬಲದಲ್ಲಿದೆ. ಇಂಡಿಯನ್‌ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಒಡಿಶಾ ಎಫ್‌ಸಿ ತಂಡವನ್ನು ಗುರುವಾರ ಬಾಗನ್‌ ಎದುರಿಸಲಿದೆ.

ಟೂರ್ನಿಯಲ್ಲಿ ಇನ್ನೂ ಒಂದೂ ಜಯ ಕಾಣದ ಒಡಿಶಾ ಪಾಯಿಂಟ್ಸ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.

ಆಡಿದ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿರುವ ಎಟಿಕೆ ಮೋಹನ್ ಬಾಗನ್‌ (ಎಟಿಕೆಎಂಬಿ) ಮೂರನೇ ಜಯದ ಮೇಲೆ ಕಣ್ಣಿಟ್ಟಿದ್ದು, ಇಲ್ಲಿ ಗೆದ್ದರೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಇದೆ. ಸದ್ಯ ಆ ತಂಡ ಎರಡನೇ ಸ್ಥಾನದಲ್ಲಿದೆ.

ADVERTISEMENT

ಎರಡು ಪಂದ್ಯಗಳಲ್ಲಿ ಎರಡು ಗೋಲು ದಾಖಲಿಸಿರುವ ರಾಯ್ ಕೃಷ್ಣ ತಮ್ಮ ಅದ್ಭುತ ಲಯವನ್ನು ಮುಂದುವರಿಸುವ ಯೋಚನೆಯಲ್ಲಿದ್ದಾರೆ. ಕೋಚ್‌ ಆ್ಯಂಟೊನಿಯೊ ಹಬಾಸ್‌ ನೇತೃತ್ವದ ಎಟಿಕೆಎಂಬಿ ಇದುವರೆಗೆ ಆಕ್ರಮಣಕಾರಿ ಆಟದಿಂದ ಗಮನಸೆಳೆದಿದೆ. ಅದೇ ತಂತ್ರವನ್ನು ಒಡಿಶಾ ಎಫ್‌ಸಿ ಎದುರು ಅನುಸರಿಸುವ ವಿಶ್ವಾಸದಲ್ಲಿದೆ.

ಎಟಿಕೆಎಂಬಿ ತಂಡದ ಈ ತಂತ್ರವನ್ನು ಚೆನ್ನಾಗಿ ಅರಿತಿರುವ ಒಡಿಶಾ ಕೋಚ್ ಸ್ಟುವರ್ಟ್‌ ಬ್ಯಾಕ್ಸ್‌ಟರ್‌ ತಮ್ಮ ತಂಡದ ಡಿಫೆನ್ಸ್ ವಿಭಾಗವನ್ನು ಬಲಗೊಳಿಸುವತ್ತ ಚಿತ್ತ ನೆಟ್ಟಿದ್ದಾರೆ.

ಒಡಿಶಾ ಎಫ್‌ಸಿಯ ಫಾರ್ವರ್ಡ್‌ ವಿಭಾಗವೂ ಪರಿಣಾಮಕಾರಿಯಾಗಬೇಕಿದೆ. ಏಕೆಂದರೆ ಎದುರಾಳಿ ಎಟಿಕೆಎಂಬಿ ಇನ್ನೂ ಒಂದು ಗೋಲನ್ನು ಎದುರಾಳಿಗೆ ಬಿಟ್ಟುಕೊಟ್ಟಿಲ್ಲ.

ಜಮ್ಶೆಡ್‌ಪುರ ಎಫ್‌ಸಿ ವಿರುದ್ಧದ ಹಣಾಹಣಿಯಲ್ಲಿ ಎರಡು ಗೋಲು ಗಳಿಸಿದ್ದ ಡಿಯೆಗೊ ಮೌರಿಸಿಯೊ ಒಡಿಶಾ ತಂಡದ ಭರವಸೆಯಾಗಿದ್ದಾರೆ. ಫಾರ್ವರ್ಡ್‌ ಆಟಗಾರ ಮಾರ್ಸೆಲಿನೊ ಅವರೂ ಲಯ ಕಂಡುಕೊಳ್ಳುವ ವಿಶ್ವಾಸದಲ್ಲಿ ಕೋಚ್‌ ಬ್ಯಾಕ್ಸ್‌ಟರ್‌ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.