ADVERTISEMENT

ಫುಟ್‌ಬಾಲ್‌: ತಮಿಳುನಾಡು ತಂಡಕ್ಕೆ ಭರ್ಜರಿ ಜಯ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 19:45 IST
Last Updated 5 ಸೆಪ್ಟೆಂಬರ್ 2019, 19:45 IST
ತಮಿಳುನಾಡು ಮತ್ತು ಆಂಧ್ರಪ್ರದೇಶ ತಂಡಗಳ ಆಟಗಾರರು ಚೆಂಡಿನ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದರು
ತಮಿಳುನಾಡು ಮತ್ತು ಆಂಧ್ರಪ್ರದೇಶ ತಂಡಗಳ ಆಟಗಾರರು ಚೆಂಡಿನ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದರು   

ಬೆಂಗಳೂರು: ತಮಿಳುನಾಡು ತಂಡವು ದಕ್ಷಿಣ ವಲಯ ಸಬ್‌ ಜೂನಿಯರ್ (14 ವರ್ಷದೊಳಗಿನವರು) ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದೆ. ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ತಮಿಳುನಾಡು 5–0 ಗೋಲುಗಳಿಂದ ಆಂಧ್ರಪ್ರದೇಶವನ್ನು ಮಣಿಸಿತು.

ಆರಂಭದಲ್ಲಿ ಉಭಯ ತಂಡಗಳು ಸಮಬಲದ ಪೈಪೋಟಿ ನಡೆಸಿದವು. ತಮಿಳುನಾಡು ಒಂದೆರಡು ಬಾರಿ ಆಂಧ್ರದ ಆವರಣಕ್ಕೆ ನುಗ್ಗಿ ಸಂಚಲನ ಉಂಟುಮಾಡಿತು. ಆದರೆ ಎದುರಾಳಿ ತಂಡದ ರಕ್ಷಣಾ ವಿಭಾಗದವರು ಕೆಚ್ಚೆದೆಯ ಆಟವಾಡಿ ತಡೆದರು. 38ನೇ ನಿಮಿಷದಲ್ಲಿ ಮುನ್ನಡೆ ಗಳಿಸುವಲ್ಲಿ ತಮಿಳುನಾಡು ಯಶಸ್ವಿಯಾಯಿತು. ನವನೀತ್ ಗೋಲು ಗಳಿಸಿ ಸಂಭ್ರಮಿಸಿದರು. ಮೂರು ನಿಮಿಷಗಳ ನಂತರ ಗಣೇಶ್ ಪಾಂಡಿ ಗಳಿಸಿದ ಗೋಲಿನ ಮೂಲಕ ತಮಿಳುನಾಡಿನ ಮುನ್ನಡೆ ಹೆಚ್ಚಾಯಿತು.

2–0 ಗೋಲುಗಳ ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿದ ತಂಡ ನಂತರ ನಿರಾಳವಾಗಿ ಆಡಿತು. 67ನೇ ನಿಮಿಷದಲ್ಲಿ ರೂನಿ ರೋಸ್ ಗೋಲು ಗಳಿಸುತ್ತಿದ್ದಂತೆ ಆಂಧ್ರ ತಂಡ ತೀವ್ರ ಒತ್ತಡಕ್ಕೆ ಒಳಗಾಯಿತು. 73ನೇ ನಿಮಿಷದಲ್ಲಿ ನವನೀತ್ ತಮ್ಮ ಎರಡನೇ ಗೋಲು ಗಳಿಸಿದರು. ಹೆಚ್ಚುವರಿ ಅವಧಿಯಲ್ಲಿ ವರುಣ್ ಕುಮಾರ್ ಗಳಿಸಿದ ಗೋಲಿನೊಂದಿಗೆ ತಮಿಳುನಾಡು ಜಯದ ಅಂತರವನ್ನು ಹೆಚ್ಚಿಸಿಕೊಂಡಿತು.

ADVERTISEMENT

ಕೇರಳಕ್ಕೆ ಭಾರಿ ಜಯ: ಬುಧವಾರ ನಡೆದ ಪಂದ್ಯದಲ್ಲಿ ಪುದುಚೇರಿ ವಿರುದ್ಧ ಕೇರಳ 14–0 ಅಂತರದ ಗೆಲುವು ಸಾಧಿಸಿತು. ವಿವೇಕ್‌ (5,14,46ನೇ ನಿಮಿಷ), ನಿರಂಜನ್‌ ವಿ.ಜೆ (7, 11ನೇ ನಿ), ಎಬಿನ್ ದಾಸ್ (45,46,52ನೇ ನಿ), ದಿಲ್ಜಿತ್‌ ಪಿ (57, 67ನೇ ನಿ), ರಕ್ಷಿತ್ ಡಿ (71ನೇ ನಿ), ಸಾನು ಎಸ್‌ (79,80ನೇ ನಿ) ಮತ್ತು ಅಮೋಘ್‌ (83ನೇ ನಿ) ಗೋಲು ಗಳಿಸಿದರು.

ನಾಳೆ ಕರ್ನಾಟಕದ ಪಂದ್ಯ: ಮೊದಲ ಪಂದ್ಯದಲ್ಲಿ ಆಂಧ್ರಪ್ರದೇಶವನ್ನು 6–0ಯಿಂದ ಮಣಿಸಿದ್ದ ಕರ್ನಾಟಕ ಶನಿವಾರ ತಮಿಳುನಾಡು ವಿರುದ್ಧ ಸೆಣಸಲಿದೆ. ಈ ಪಂದ್ಯವನ್ನು ‘ಎ’ ಗುಂಪಿನ ವಿಜೇತರನ್ನು ನಿರ್ಣಯಿಸಲಿದ್ದು ರಾಷ್ಟ್ರೀಯ ಟೂರ್ನಿಗೆ ಅರ್ಹತೆ ಪಡೆದುಕೊಳ್ಳಲಿದೆ.

ಇಂದಿನ ಪಂದ್ಯ

ಕೇರಳ–ತೆಲಂಗಾಣ (ಬಿ ಗುಂಪು)

ಆರಂಭ: ಸಂಜೆ 3.45

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.