
ಬೆಂಗಳೂರು: ಆತಿಥೇಯ ಕರ್ನಾಟಕ ತಂಡವು ಇಲ್ಲಿ ನಡೆದ ಖೇಲೊ ಇಂಡಿಯಾ– ಅಸ್ಮಿತಾ 13 ವರ್ಷದೊಳಗಿನ ಬಾಲಕಿಯರ ಫುಟ್ಬಾಲ್ ಲೀಗ್ (ದಕ್ಷಿಣ ವಲಯ) ನಲ್ಲಿ ಪ್ರಶಸ್ತಿ ಗೆದ್ದು, ರಾಷ್ಟ್ರೀಯ ಸುತ್ತಿನ ಸ್ಪರ್ಧೆಗೆ ಅರ್ಹತೆ ಪಡೆಯಿತು.
ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವು 3–0 ಕೇರಳ ತಂಡವನ್ನು ಮಣಿಸಿತು. ರನ್ನರ್ಸ್ ಅಪ್ ಆದ ಕೇರಳ ತಂಡವೂ ರಾಷ್ಟ್ರೀಯ ಸುತ್ತಿಗೆ ಟಿಕೆಟ್ ಪಡೆಯಿತು.
ಕರ್ನಾಟಕ ತಂಡದ ಪರ ರುಕ್ಷಾನಾ (23ನೇ) ಮತ್ತು ಸುಭಾತ್ರ ಎ. (54ನೇ) ಅವರು ತಲಾ ಒಂದು ಗೋಲು ಗಳಿಸಿದರು. ಮತ್ತೊಂದು ಗೋಲು ಎದುರಾಳಿ ತಂಡದ ಆದಿಯಾ ದಿನೇಶ್ (53ನೇ) ಅವರಿಂದ ‘ಉಡುಗೊರೆ’ಯಾಗಿ ಲಭಿಸಿತು.
ಭಾರತ ಕ್ರೀಡಾ ಪ್ರಾಧಿಕಾರದ ಆಡಳಿತಾಧಿಕಾರಿ ರಾಜೇಶ್ ಅವರು ವಿಜೇತ ತಂಡಕ್ಕೆ ಟ್ರೋಫಿಯನ್ನು ಹಸ್ತಾಂತರಿಸಿದರು. ಕೆಎಸ್ಎಫ್ಎ ಪ್ರಧಾನ ಕಾರ್ಯದರ್ಶಿ ಎಂ.ಕುಮಾರ್, ಕೋಶಾಧಿಕಾರಿ ಬಿ.ಕೆ. ಮುನಿರಾಜು, ಬಿಡಿಎಫ್ಎ ಮಾಜಿ ಅಧ್ಯಕ್ಷ ಎಸ್.ಎಲ್. ಆ್ಯಂಟನಿ, ಪ್ರಧಾನ ಉಪ ಕಾರ್ಯದರ್ಶಿ ಹನೀಫ್, ಉಪಾಧ್ಯಕ್ಷ ಕಮಲ್ ಬಿ, ಸುಕಾನಂದ, ಅಂತರರಾಷ್ಟ್ರೀಯ ಮಾಜಿ ಆಟಗಾರ್ತಿ ಚಿತ್ರಾ ಗಂಗಾಧರ್, ರೆಫ್ರಿ ಬೋರ್ಡ್ ಅಧ್ಯಕ್ಷ ಟಿ. ಎಳಂಗೋವನ್, ಕೆಎಸ್ಎಫ್ಎ ಎಚ್ಒಆರ್ ಆ್ಯಂಡ್ರೂ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.