ADVERTISEMENT

ಎನ್‌ಸಿಎ ಅಂಗಳದಲ್ಲಿ ನವಪ್ರತಿಭೆಗಳ ಕಲರವ

16 ಕಾಮನ್‌ವೆಲ್ತ್ ರಾಷ್ಟ್ರಗಳ ಮಕ್ಕಳಿಗೆ ವಿಶೇಷ ತರಬೇತಿ ಶಿಬಿರ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 20:00 IST
Last Updated 18 ಅಕ್ಟೋಬರ್ 2019, 20:00 IST
ಅಭ್ಯಾಸ ನಡೆಸುತ್ತಿರುವ ಬಾಲಕಿಯರು–ಪ್ರಜಾವಾಣಿ ಚಿತ್ರ/ಎಸ್‌.ಕೆ. ದಿನೇಶ್
ಅಭ್ಯಾಸ ನಡೆಸುತ್ತಿರುವ ಬಾಲಕಿಯರು–ಪ್ರಜಾವಾಣಿ ಚಿತ್ರ/ಎಸ್‌.ಕೆ. ದಿನೇಶ್   

ಬೆಂಗಳೂರು: ‘ ಇಲ್ಲಿಗೆ ಬರುವವರೆಗೂ ನನಗೆ ಕ್ರಿಕೆಟ್‌ ಬಗ್ಗೆ ಏನೂ ಗೊತ್ತಿರಲಿಲ್ಲ. ಆದರೆ ಈಗ ಬ್ಯಾಟ್ ಹಿಡಿಯುವ, ಚೆಂಡನ್ನು ಎಸೆಯುವುದನ್ನು ಕಲಿತಿದ್ದೇನೆ. ನಿಯಮಗಳನ್ನೂ ಅರಿತಿದ್ದೇನೆ. ಆಡುವ ಕಲೆ ಕರಗತ ಮಾಡಿಕೊಳ್ಳುತ್ತಿದ್ದೇನೆ. ನನ್ನ ದೇಶಕ್ಕೆ ಮರಳುವಾಗ ಬಹಳಷ್ಟು ಪಾಠಗಳನ್ನು, ಸುಂದರ ನೆನಪುಗಳನ್ನು ಮತ್ತು ಕ್ರಿಕೆಟ್ ಆಟವನ್ನು ತೆಗೆದುಕೊಂಡು ಹೋಗುತ್ತೇನೆ’–

ಉಗಾಂಡದ ಮುನಿರೂ ಇಸ್ಮಾಯಿಲ್ ಅವರ ವಿಶ್ವಾಸಭರಿತ ಮಾತುಗಳಿವು. 15 ವರ್ಷದ ಆ ಹುಡುಗನ ಮುಖದಲ್ಲಿ ದೊಡ್ಡ ನಗೆಯಿತ್ತು. ಕಣ್ಣುಗಳಲ್ಲಿ ಹೊಳಪಿತ್ತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆವರಣದಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ)ಯಲ್ಲಿ ವಿಶೇಷ ತರಬೇತಿ ಪಡೆಯುತ್ತಿರುವ 16 ಕಾಮನ್‌ವೆಲ್ತ್‌ ದೇಶಗಳ ಪ್ರತಿಭೆಗಳಲ್ಲಿ ಇಸ್ಮಾಯಿಲ್ ಒಬ್ಬರಾಗಿದ್ದಾರೆ.

ADVERTISEMENT

ಅವರಷ್ಟೇ ಅಲ್ಲ ಜಮೈಕಾದ ಸ್ಟೀವನ್ ಝಿಮಿಕಾ ಅವರ ಅನುಭವವೂ ತುಸು ಭಿನ್ನ.

‘ನಮ್ಮ ದೇಶದಲ್ಲಿಯೂ ಕ್ರಿಕೆಟ್‌ ಜನಪ್ರಿಯವಾಗಿದೆ. ಆದರೆ, ಮೂಲಸೌಕರ್ಯಗಳು ಇಲ್ಲ. ನಾನು ವಯೋವರ್ಗದ ಕ್ರಿಕೆಟ್‌ನಲ್ಲಿ ಆಡಿದ್ದೇನೆ. ಆದರೆ, ಬಹಳ ಕಷ್ಟಪಟ್ಟು ತರಬೇತಿ ಪಡೆದೆ. ಸೌಲಭ್ಯಗಳನ್ನು ಒದಗಿಸಿಕೊಳ್ಳಬೇಕಾಯಿತು. ಇಲ್ಲಿಯ ಸೌಲಭ್ಯಗಳು ವಿಶ್ವದರ್ಜೆಯದ್ದಾಗಿವೆ.

ಕಳೆದ ಮೂರು ವಾರಗಳಿಂದ ಇಲ್ಲಿದ್ದೇನೆ. ನನ್ನ ಜೀವನವೇ ಬದಲಾದಂತಾಗಿದೆ. ಪದೇ ಪದೇ ಇಲ್ಲಿಗೆ ಬರುವ ಮನಸ್ಸಾಗುತ್ತಿದೆ’ ಎಂದು ಸ್ಟೀವನ್ ಹೇಳುತ್ತಾರೆ.

ಕೇಂದ್ರ ಕ್ರೀಡಾ ಇಲಾಖೆ, ವಿದೇಶಾಂಗ ಸಚಿವಾಲಯ ಮತ್ತು ಬಿಸಿಸಿಐ ಜಂಟಿ ಸಹಯೋಗದಲ್ಲಿ ನಡೆಯುತ್ತಿರುವ ವಿಶೇಷ ತರಬೇತಿ ಶಿಬಿರದ ಉಸ್ತುವಾರಿಯನ್ನು ಎನ್‌ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ವಹಿಸಿಕೊಂಡಿದ್ದಾರೆ. ಒಟ್ಟು 35 ಯುವ ಆಟಗಾರರು ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.