ನವದೆಹಲಿ: ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾಗವಹಿಸುವುದನ್ನು ಖಚಿತಪಡಿಸಲು ಭಾರತದ ಅಥ್ಲೀಟ್ಗಳಾದ ಕೆ.ಟಿ.ಇರ್ಫಾನ್ ಹಾಗೂ ಎಂ.ಶ್ರೀಶಂಕರ್ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಬೇಕಿದೆ. ನಡಿಗೆ ಸ್ಪರ್ಧಿ ಭಾವನಾ ಜಾಟ್ ಅವರು ಶುಕ್ರವಾರ ಈ ಪರೀಕ್ಷೆ ಮಾಡಿಸಿಕೊಂಡರು.
ಸದ್ಯ ಈ ಮೂವರು ಅಥ್ಲೀಟ್ಗಳು ಬೆಂಗಳೂರಿನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಭಾವನಾ ಮತ್ತು ಇರ್ಫಾನ್ ಅವರು 20 ಕಿ.ಮೀ. ನಡಿಗೆ ಮತ್ತು ಶ್ರೀಶಂಕರ್ ಲಾಂಗ್ ಜಂಪ್ ಸ್ಫರ್ಧಿಗಳಾಗಿದ್ದು, ಭಾರತ ಅಥ್ಲೆಟಿಕ್ಸ್ ಫೆಡರೇಷನ್ (ಎಎಫ್ಐ) ಈ ಮೂವರಿಗೆ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿತ್ತು.
‘ಫಿಟ್ ಆಗಿಲ್ಲದ ಅಥ್ಲೀಟ್ಗಳನ್ನು ಒಲಿಂಪಿಕ್ಸ್ಗೆ ಕರೆದೊಯ್ಯಲು ಸಾಧ್ಯವಿಲ್ಲ. ಕ್ರೀಡಾಪಟುಗಳು ಒಲಿಂಪಿಕ್ಸ್ ಅರ್ಹತೆ ಪಡೆದ ಬಳಿಕ ಗಾಯದಿಂದ ಮುಕ್ತರಾಗಿದ್ದು, ಸ್ಪರ್ಧೆಗೆ ಅರ್ಹರಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಇದು ಫಿಟ್ನೆಸ್ ಪರೀಕ್ಷೆ ಮಾತ್ರ‘ ಎಂದು ಎಎಫ್ಐ ಅಧ್ಯಕ್ಷ ಆದಿಲ್ ಸುಮರಿವಾಲಾ ಹೇಳಿದ್ದಾರೆ.
ಇರ್ಫಾನ್ ಅವರು ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿದ ಭಾರತದ ಮೊದಲಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಆಗಿದ್ದಾರೆ. 2019ರಲ್ಲಿ ಜಪಾನ್ನಲ್ಲಿ ನಡೆದ ಏಷ್ಯನ್ ನಡಿಗೆ ಚಾಂಪಿಯನ್ಷಿಪ್ನಲ್ಲಿ ಅವರು ಈ ಅರ್ಹತೆ ಗಳಿಸಿದ್ದರು.
ಭಾವನಾ 2020ರ ರಾಷ್ಟ್ರೀಯ ನಡಿಗೆ ಸ್ಪರ್ಧೆಯಲ್ಲಿ ಮತ್ತು ಶ್ರೀಶಂಕರ್ ಅವರು ರಾಷ್ಟ್ರೀಯ ಫೆಡರೇಷನ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ ಮೂಲಕ ಟೋಕಿಯೊ ಕ್ರೀಡಾಕೂಟಕ್ಕೆ ಅರ್ಹತೆ ಗಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.