ADVERTISEMENT

ಲೋಕಸಭೆಯಲ್ಲಿ ಉದ್ದೀಪನ ಮದ್ದು ತಡೆ ಮಸೂದೆ ಮಂಡನೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2021, 15:51 IST
Last Updated 17 ಡಿಸೆಂಬರ್ 2021, 15:51 IST
ಅನುರಾಗ್ ಠಾಕೂರ್
ಅನುರಾಗ್ ಠಾಕೂರ್   

ನವದೆಹಲಿ: ಭಾರತದ ಕ್ರೀಡಾಕ್ಷೇತ್ರದಲ್ಲಿ ಉದ್ದೀಪನ ಮದ್ದು ಸೇವನೆಯ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತಡೆಯಲು ರೂಪಿಸಲಾಗಿದೆಯೆನ್ನಲಾದ ನೂತನ ಮಸೂದೆಯನ್ನು ಶುಕ್ರವಾರ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಲೋಕಸಭೆಯಲ್ಲಿ ಮಂಡಿಸಿದರು.

ಲಖೀಂಪುರ ಖೇರಿ ಪ್ರಕರಣದ ಕುರಿತು ನಡೆದಿದ್ದ ಗೊಂದಲ, ಮಾತಿನ ಚಕಮಕಿಯ ಸಂದರ್ಭದಲ್ಲಿಯೇ ಠಾಕೂರ್ ಮಸೂದೆಯನ್ನು ಮಂಡಿಸಿದರು.

‘ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ), ರಾಷ್ಟ್ರೀಯ ಉದ್ದೀಪನ ಮದ್ದು ಪರೀಕ್ಷೆ ಪ್ರಯೋಗಾಲಯ (ಎನ್‌ಡಿಟಿಎಲ್) ಮತ್ತು ಇನ್ನಿತರ ಮದ್ದು ಪರೀಕ್ಷಾ ಪ್ರಯೋಗಾಲಯಗಳ ಕಾರ್ಯಕ್ಷಮತೆಯನ್ನು ವೃದ್ಧಿಸುವ ಕ್ರಮಗಳನ್ನು ಜಾರಿಗೊಳಿಸುವ ಉದ್ದೇಶ ಈ ಮಸೂದೆಯಲ್ಲಿದೆ. ದೇಶದಲ್ಲಿ ಮದ್ದು ಸೇವನೆ ಪ್ರಕರಣಗಳನ್ನು ತಡೆಯುವ ಬಗ್ಗೆ ಹೆಚ್ಚು ಕಾರ್ಯಕ್ರಮ ರೂಪಿಸಿ, ಕ್ರೀಡಾಕ್ಷೇತ್ರವನ್ನು ಸದೃಢಗೊಳಿಸುವುದು ಪ್ರಮುಖ ಗುರಿ’ ಎಂದು ಠಾಕೂರ್ ಹೇಳಿದ್ದಾರೆ.

ADVERTISEMENT

ಇದಕ್ಕೂ ಮುನ್ನ ನಾಡಾ ಅಧಿಕಾರಿಗಳಿಗೆ ಉದ್ದೀಪನ ಮದ್ದು ಸೇವನೆ ಪತ್ತೆ ಹಚ್ಚಲು ದಾಳಿ ನಡೆಸುವ ಅಧಿಕಾರ ಇರಲಿಲ್ಲ. ಆದರೆ ಈ ಮಸೂದೆ ಅಂಗೀಕಾರವಾದರೆ ದಾಳಿ ಮಾಡುವ ಅಧಿಕಾರ ಸಿಗಲಿದೆ.‌

‘ಉದ್ದೀಪನ ಮದ್ದು ತಡೆ ನಿಯಮ ಉಲ್ಲಂಘನೆ ಕುರಿತು ದೂರು ಅಥವಾ ಅನುಮಾನ ಬಂದಾಗ ದಾಳಿ ಮಾಡಿ ಮುಂದಿನ ಕ್ರಮ ಜರುಗಿಸು ಅಧಿಕಾರ ನಾಡಾದಿಂದ ಅಧಿಕೃತ ಮಾನ್ಯತೆ ಪಡೆದ ವ್ಯಕ್ತಿಗೆ ಇರುತ್ತದೆ’ ಎಂದು ಠಾಕೂರ್ ಹೇಳಿದ್ದಾರೆ.

ನಾಡಾದ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸಿ ಸದೃಢಗೊಳಿಸಬೇಕು ಎಂದು ಬಹಳಷ್ಟು ಕ್ರೀಡಾ ಫೆಡರೇಷನ್‌ಗಳು ಮತ್ತು ಮಾಜಿ ಅಥ್ಲೀಟ್‌ಗಳು ಆಗ್ರಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.