ಬೆಂಗಳೂರು: ದಶಕಗಳ ಇತಿಹಾಸ ಇರುವ ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ (ಕೆಎಎ)ಯು ‘ವಿಷನ್–2022’ ಯೋಜನೆಯನ್ನು ಆರಂಭಿಸಲಿದೆ.
ಸಂಸ್ಥೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಮುಖ್ಯ ಕಾರ್ಯನಿರ್ವ ಹಣಾಧಿಕಾರಿಯನ್ನೂ ನೇಮಕ ಮಾಡು ತ್ತಿದೆ. ಸೋಮವಾರ ನಗರದಲ್ಲಿ ನಡೆಯ ಲಿರುವ ಕಾರ್ಯಕ್ರಮದಲ್ಲಿ ಮುಂದಿನ ನಾಲ್ಕು ವರ್ಷಗಳಲ್ಲಿ ಕೈಗೊಳ್ಳಲಿರುವ ಯೋಜನೆಗಳ ‘ಪ್ರಣಾಳಿಕೆ’ ಬಿಡುಗಡೆ ಆಗಲಿದೆ. ಇದೇ ಸಂದರ್ಭದಲ್ಲಿ ಸಿಇಒ ಪದಗ್ರಹಣವೂ ನಡೆಯಲಿದೆ.
‘ಸಂಸ್ಥೆಗೆ ವೃತ್ತಿಪರ ಸ್ಪರ್ಶ ನೀಡು ವುದು ಅಗತ್ಯವಾಗಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ವಿವಿಧ
ಯೋಜನೆಗಳನ್ನು ಕೈಗೊಳ್ಳಲಾಗುವುದು. ಮೊದಲಿಗೆ ರಾಜ್ಯದಲ್ಲಿರುವ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ಗಳ ಮಾಹಿತಿ ಕೋಶ (ಡೇಟಾ ಬೇಸ್) ರಚಿಸಬೇಕಿದೆ. ಅದರಿಂದ ರಾಜ್ಯದಲ್ಲಿ ಯಾವ ಯಾವ ವಯೋಮಿತಿಯಲ್ಲಿ ಎಷ್ಟು ಮಂದಿ ಅಥ್ಲೀಟ್ಗಳಿದ್ದಾರೆ ಎಂಬುದು ತಿಳಿಯಲಿದೆ. ಆ ಮಾಹಿತಿಯ ಮೂಲಕ ಅವರೆಲ್ಲರ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಮೌಲ್ಯಮಾಪನ ಮಾಡಲು ಅನುವಾಗುತ್ತದೆ. ಆಗ ಕೋಚಿಂಗ್, ಮೂಲಸೌಲಭ್ಯ ಅಭಿವೃದ್ಧಿ ಮತ್ತಿತರ ನೆರವುಗಳನ್ನು ನೀಡಲು ಕ್ರಮ ಕೈಗೊಳ್ಳಬಹುದು’ ಎಂದು ಸಂಸ್ಥೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
‘ಈ ಹಿಂದೆ ನಮ್ಮ ರಾಜ್ಯವು ಹಲವಾರು ಅಂತರರಾಷ್ಟ್ರೀಯ ಅಥ್ಲೀಟ್ಗಳನ್ನು ದೇಶಕ್ಕೆ ಕೊಡುಗೆ ನೀಡಿದೆ. ಆದರೆ ಕಳೆದ ಒಂದೆರಡು ದಶಕಗಳಿಂದ ದೊಡ್ಡ ಸಾಧನೆಗಳು ಮೂಡಿ ಬರುತ್ತಿಲ್ಲ. ಆದರೆ, ಸಾಕಷ್ಟು ಪ್ರತಿಭಾವಂತರು ಇದ್ದಾರೆ. ಗ್ರಾಮೀಣ, ಪಟ್ಟಣ ಮತ್ತು ಮಹಾನಗರಗಳಲ್ಲಿರುವ ಪ್ರತಿಭಾವಂತರನ್ನು ಗುರುತಿಸುವ ಕಾರ್ಯಕ್ಕೆ ಒತ್ತು ನೀಡಲಾಗುವುದು. ಕಾರ್ಪೊರೆಟ್ ಸಂಸ್ಥೆಗಳು ಮತ್ತು ಆಸಕ್ತ ಸಂಸ್ಥೆಗಳ ನೆರವಿ ನೊಂದಿಗೆ ಕ್ರೀಡಾಪಟುಗಳಿಗೆ ಆಧುನಿಕ ರೀತಿಯ ಸವಲತ್ತುಗಳನ್ನು ನೀಡುವ ಯೋಜನೆ ಇದೆ’ ಎಂದು ತಿಳಿಸಿದ್ದಾರೆ.
‘ನಮ್ಮ ಮುಂದೆ ಹಲವು ಕ್ಲಿಷ್ಟ ಸವಾಲುಗಳು ಇವೆ. ಬೆಂಗಳೂರಿನ ಕಂಠೀ ರವ ಕ್ರೀಡಾಂಗಣವು ಅಥ್ಲೆಟಿಕ್ಸ್ಗಾಗಿಯೇ ಇರುವುದು. ಆದರೆ ಇತ್ತೀಚೆಗೆ ಫುಟ್ಬಾಲ್ ಕ್ಲಬ್ಗೆ ಬಿಟ್ಟುಕೊಡುತ್ತಿರುವುದರಿಂದ ಅಥ್ಲೀಟ್ಗಳು ಸೌಲಭ್ಯವಿಲ್ಲದೇ ಪರದಾಡುವಂತಾಗಿದೆ. ಮೊದಲು ಈ ಸಮಸ್ಯೆಯನ್ನು ಬಗೆಹರಿಸಲು. ಕ್ರೀಡಾ ಇಲಾಖೆಯೊಂದಿಗೆ ನಮ್ಮ ನಿಯೋಗವು ಚರ್ಚೆ ನಡೆಸಲಿದೆ. ಕೆಎಎ ಅಧ್ಯಕ್ಷರಾದ ಮುತ್ತಪ್ಪ ರೈ ಅವರು ನಿಯೋಗದ ನೇತೃತ್ವ ವಹಿಸುವರು’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.