ನವದೆಹಲಿ (ಪಿಟಿಐ): ಏಷ್ಯನ್ ಹಾಗೂ ಕಾಮನ್ವೆಲ್ತ್ ಗೇಮ್ಸ್ ಗೇಮ್ಸ್ ಚಿನ್ನ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ ಶುಕ್ರವಾರ ದೇಶದ ಅತ್ಯುನ್ನತ ಕ್ರೀಡಾ ಗೌರವ ರಾಜೀವ್ ಗಾಂಧಿ ಖೇಲ್ರತ್ನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
12 ಸದಸ್ಯರನ್ನು ಒಳಗೊಂಡ ಆಯ್ಕೆ ಸಮಿತಿಯು ಶುಕ್ರವಾರ ಸಭೆ ಸೇರಿ ಬಜರಂಗ್ ಅವರ ಹೆಸರನ್ನು ಅಂತಿಮಗೊಳಿಸಿತ್ತು. ನಿವೃತ್ತ ನ್ಯಾಯಮೂರ್ತಿ ಮುಕುಂದಕಂ ಶರ್ಮಾ ನೇತೃತ್ವದ ಸಮಿತಿಯಲ್ಲಿ ಹಿರಿಯ ಫುಟ್ಬಾಲ್ ಆಟಗಾರ ಬೈಚುಂಗ್ ಭುಟಿಯಾ ಹಾಗೂ ಬಾಕ್ಸಿಂಗ್ ಆಟಗಾರ್ತಿ ಮೇರಿ ಕೋಮ್ ಕೂಡ ಇದ್ದಾರೆ.
‘ಬಜರಂಗ್ ಅವರನ್ನು ಖೇಲ್ರತ್ನ ಪ್ರಶಸ್ತಿಗೆ ಒಮ್ಮತದಿಂದ ನಾಮನಿರ್ದೇಶನ ಮಾಡಲಾಗಿದೆ. ಆಯ್ಕೆ ಸಮಿತಿ ಸಭೆಯು ಶನಿವಾರ ಮುಂದುವರಿಯಲಿದ್ದು, ಅರ್ಜುನ ಹಾಗೂ ದ್ರೋಣಾಚಾರ್ಯ ಪ್ರಶಸ್ತಿಗೆ ಹೆಸರುಗಳನ್ನು ಅಂತಿಮಗೊಳಿಸಲಿದೆ. ಅಲ್ಲದೆ ಇನ್ನೊಬ್ಬ ಪ್ರಮುಖ ಅಥ್ಲೀಟ್ ಅವರ ಹೆಸರನ್ನು ಖೇಲ್ರತ್ನ ಪ್ರಶಸ್ತಿಗೆ ಶಿಫಾರಸು ಮಾಡುವ ಸಾಧ್ಯತೆಯಿದೆ’ ಎಂದು ಮೂಲಗಳು ತಿಳಿಸಿವೆ.
ಏಷ್ಯನ್ ಹಾಗೂ ಕಾಮನ್ವೆಲ್ತ್ ಗೇಮ್ಸ್ಗಳಲ್ಲಿ ಚಿನ್ನ ಗೆದ್ದರೂ ಹೋದ ವರ್ಷ ಖೇಲ್ರತ್ನ ಪ್ರಶಸ್ತಿಗೆಬಜರಂಗ್ ನಾಮನಿರ್ದೇಶನಗೊಂಡಿರಲಿಲ್ಲ. ಹೀಗಾಗಿ ಅವರು ಕೋರ್ಟ್ ಮೊರೆಹೋಗುವುದಾಗಿ ಬೆದರಿಕೆ ಹಾಕಿದ್ದರು.
‘ಖೇಲ್ರತ್ನ ಪ್ರಶಸ್ತಿ ಪಡೆಯುವಷ್ಟು ಸಾಧನೆಯನ್ನು ನಾನು ಮಾಡಿದ್ದೇನೆ. ಹೆಚ್ಚು ಅರ್ಹರಾದವರಿಗೆ ಪ್ರಶಸ್ತಿ ಸಲ್ಲಬೇಕು ಎಂದು ನಾನು ಯಾವಾಗಲೂ ಹೇಳುತ್ತೇನೆ’ ಎಂದು ಬಜರಂಗ್ ಪ್ರತಿಕ್ರಿಯಿಸಿದ್ದಾರೆ..
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.